ಬೆಂಗಳೂರು: ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಕೊನೆ ಕ್ಷಣದಲ್ಲಿ ಮೋಸ ಮಾಡಿದ್ದಾರೆ: ಹೀಗಾಗಿ ನಾವು ಯಾವುದೇ ಕಾರಣಕ್ಕೂ ಅವರನ್ನು ಫಾಲೋ ಮಾಡಲ್ಲ ಎಂದು ಮುಂಬಯಿಯಿಂದ ಅತೃಪ್ತ ಶಾಸಕರು ಸಂದೇಶ ರವಾನಿಸಿದ್ದಾರೆ.
ಕಾಂಗ್ರೆಸ್ ನಾಯಕರ ಒತ್ತಾಯದ ಮೇರೆಗೆ ನಾನು ರಾಜಿನಾಮೆ ವಾಪಸ್ ಪಡೆಯುತ್ತಿದ್ದೇನೆ, ವಿಶ್ವಾಸ ಮತಕ್ಕೆ ನಾನು ಬೆಂಬಲ ಸೂಚಿಸುತ್ತೇನೆ ಎಂಬ ಹೇಳಿಕೆ ನೀಡಿರುವ ಬೆನ್ನಲ್ಲೇ ಈ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ಶಾಸಕ ಎಸ್,ಟಿ ಸೋಮಶೇಖರ್, ನಾನು, ರಾಮಲಿಂಗಾ ರೆಡ್ಡಿ, ಬೈರತಿ ಬಸವರಾಜ್ ಹಾಗೂ ಮುನಿರತ್ನ ಒಟ್ಟಾಗಿ ಕೂತು ಚರ್ಚಿಸಿ ರಾಜಿನಾಮೆ ನಿರ್ಧಾರ ಕೈಗೊಂಡಿದ್ದೇವು, ಯಾವುದೇ ಕಾರಣಕ್ಕೂ ರಾಜಿನಾಮೆ ವಾಪಸ್ ಪಡೆಯಬಾರದೆಂದು ನಾಲ್ವರು ನಿರ್ಧರಿಸಿದ್ದೆವು, ಆದರೆ ರಾಮಲಿಂಗಾರೆಡ್ಡಿ ರಾಜಿನಾಮೆ ವಾಪಸ್ ಪಡೆಯುವುದಾಗಿ ಹೇಳಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ, ಆದರೆ ನಾವು ಯಾವುದೇ ಕಾರಣಕ್ಕೂ ಅವರನ್ನು ಅನುಸರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.