ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆಗೆ ನಾಳೆ ಅಂತಿಮ ಗಡುವನ್ನು ಮೈತ್ರಿ ನಾಯಕರು ತೆಗೆದುಕೊಂಡಿರುವಂತೆ ಮುಂಬೈನಲ್ಲಿರುವ ಕಾಂಗ್ರೆಸ್ ಬಂಡಾಯ ಶಾಸಕರನ್ನು ಮನವೊಲಿಸುವ ಪ್ರಯತ್ನಗಳು ನಡೆಯುತ್ತವೆ. ಆದರೆ, ನಾವು ಬೆಂಗಳೂರಿಗೆ ವಾಪಾಸ್ ಬರುವ ಪ್ರಶ್ನೆಯೇ ಇಲ್ಲ ಎಂದು ಬಂಡಾಯ ಶಾಸಕರು ತಿಳಿಸಿದ್ದಾರೆ.
ಮುಂಬೈಯಲ್ಲಿರುವ 13 ಶಾಸಕರು ಒಟ್ಟಾಗಿದ್ದು, ನಮ್ಮಲ್ಲಿ ಯಾವುದೇ ಬಿರುಕು ಆಗಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ ಅದನ್ನು ಸ್ಪೀಕರ್ ಅಂಗೀಕರಿಸಬೇಕು, ಅಲ್ಲಿಯವರೆಗೂ ನಾವುಗಳು ಯಾರು ಕೂಡಾ ಬೆಂಗಳೂರಿಗೆ ವಾಪಾಸ್ ಆಗುವುದಿಲ್ಲ ಎಂದು ಬಂಡಾಯ ಶಾಸಕರಲ್ಲಿ ಒಬ್ಬರಾದ ಎಚ್. ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ಯಾರೇ ಸಿಎಂ ಆಗಲೀ ನಾವು ಮಾತ್ರ ಬೆಂಗಳೂರಿಗೆ ವಾಪಾಸ್ ಆಗಲ್ಲ, ವಿಶ್ವಾಸಮತಯಾಚನೆ ಪ್ರಕ್ರಿಯೆಯಲ್ಲೂ ಪಾಲ್ಗೊಳ್ಳುವುದಿಲ್ಲ. ಉಳಿದಿರುವ ಶಾಸಕರನ್ನು ಉಳಿಸಿಕೊಳ್ಳಲು ಇಂತಹ ಹೇಳಿಕೆ ನೀಡಲಾಗುತ್ತಿದೆ. ಸಿದ್ದರಾಮಯ್ಯ ತಮ್ಮನ್ನು ಸಂಪರ್ಕಿಸಿಲ್ಲ, ಅವರ ಜೊತೆಗೆ ಮಾತನಾಡುವುದು ಇಲ್ಲ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.