ರಾಜಕೀಯ

ವಿಚಾರಣೆಗೆ ಹಾಜರಾಗದಿದ್ದರೆ ಕಠಿಣ ಕ್ರಮ: ರೆಬೆಲ್ ಶಾಸಕರಿಗೆ ಸ್ಪೀಕರ್ ನೋಟಿಸ್

Srinivasamurthy VN
ಬೆಂಗಳೂರು: ಇಂದು ವಿಚಾರಣೆಗೆ ಹಾಜರಾಗದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅತೃಪ್ಕ ಶಾಸಕರ ವಿರುದ್ಧ ಸ್ಪೀಕರ್ ಕಿಡಿಕಾರಿದ್ದು, ಮಂಗಳವಾರ ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ದೋಸ್ತಿ ಸರ್ಕಾರದ ಅತೃಪ್ತ ಶಾಸಕರು ನೀಡಿರುವ ರಾಜಿನಾಮೆ ವಿಚಾರವಾಗಿ ಸ್ಪೀಕರ್ ರಮೇಶ್ ಕುಮಾರ್ ಅವರು ವಿಚಾರಣೆ ನಡೆಸುತ್ತಿದ್ದು, ಈ ಹಿಂದೆ ಎರಡು ಬಾರಿ ಅತೃಪ್ತರನ್ನು ವಿಚಾರಣೆಗೆ ಆಗಮಿಸುವಂತೆ ಸೂಚಿಸಿದ್ದರು. ಎರಡು ಬಾರಿಯೂ ಅತೃಪ್ತ ಶಾಸಕರು ವಿಚಾರಣೆಗೆ ಗೈರಾಗಿದ್ದರು. ಇದೀಗ ಮತ್ತೆ ಸ್ಪೀಕರ್ ರಮೇಶ್ ಕುಮಾರ್ ಅವರು ಮೂರನೇ ಬಾರಿಗೆ ಅತೃಪ್ತ ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ವಿಚಾರಣೆಗೆ ಗೈರಾದರೆ ಕಠಿಣ ಕ್ರಮ ಜರುಗಿಸುವ ಕುರಿತು ಎಚ್ಚರಿಕೆ ಕೂಡ ನೀಡಿದ್ದಾರೆ.
ಜಪ್ಪಯ್ಯ ಅಂದ್ರೂ ವಿಚಾರಣೆಗೆ ಹಾಜರಾಗಲ್ಲ ಎನ್ನುತ್ತಿರುವ ಅತೃಪ್ತ ಶಾಸಕರು
ಆದರೆ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ದೇಶನಕ್ಕೆ ಸೊಪ್ಪು ಹಾಕದ ಅತೃಪ್ತ ಶಾಸಕರು ಯಾವುದೇ ಕಾರಣಕ್ಕೂ ನಾವು ವಿಚಾರಣೆಗೆ ಹಾಜರಾಗುವ ಪ್ರಶ್ನೆಯೇ ಇಲ್ಲ. ಸ್ಪೀಕರ್ ಬೇಕಿದ್ದರೆ ನಮ್ಮನ್ನು ಅನರ್ಹತೆಗೊಳಿಸಲಿ. ನಾವು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡುತ್ತೇವೆ. ಒಂದು ವೇಳೆ ನಾವು ಚುನಾವಣೆಗೆ ನಿಲ್ಲಲಾಗದಿದ್ದರೂ, ನನ್ನ ಬೆಂಬಲಿಗರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತೇವೆ ಎಂದು ಸವಾಲೆಸೆದಿದ್ದಾರೆ.
ಇದೇ ವೇಳೆ ನಾವು ಅನಿವಾರ್ಯ ಕಾರಣಗಳಿಂದ ಹೊರಗಡೆ ಇದ್ದು, ನಮಗೆ ನಾಲ್ಕು ವಾರಗಳ ಕಾಲ ಸಮಯ ಬೇಕು. ಈ ಕುರಿತಂತೆ ಸ್ಪೀಕರ್ ಅವರ ಬಳಿಯೂ ಮನವಿ ಮಾಡಿದ್ದೇವೆ ಎಂದು ಅತೃಪ್ತ ಶಾಸಕರು ಹೇಳಿದ್ದಾರೆ.
SCROLL FOR NEXT