ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ತಮಗಿರುವ ಇತಿಮಿತಿಗಳ ಬಗ್ಗೆ ಪ್ರಸ್ತಾಪಿಸಿದ್ದ ಕುಮಾರಸ್ವಾಮಿ14 ತಿಂಗಳಲ್ಲಿ ತಮ್ಮ ನಾಯಕತ್ವದಲ್ಲಿ ಮಾಡಿದ ಸಾಧನೆಗಳ ವಿವರಣೆಯನ್ನು ಬಿಚ್ಚಿಟ್ಟರು. ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಂತ್ರಸ್ತನಂತಾಗಿದ್ದೆ, ನನ್ನನ್ನು ಹಾಸ್ಯದ ವಸ್ತುವನ್ನಾಗಿ ಬಳಸಿಕೊಳ್ಳಲಾಗಿತ್ತು ಎಂದು ಬೇಸರ ವ್ಯಕ್ತ ಪಡಿಸಿದರು.
ತಮ್ಮ ತಂದೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬಗ್ಗೆ ಯಾರೂ ಹಗುರವಾಗಿ ಮಾತನಾಡಬೇಡಿ,. ನನ್ನನ್ನು ಇಷ್ಟಪಡುವಷ್ಟೇ ನನ್ನ ತಂದೆಯನ್ನು ಇಷ್ಟಪಡಿ, ಯಾವುದೇ ಪಕ್ಷದಿಂದ ಅಥವಾ ಯಾರದೋ ನೆರಳಿನಲ್ಲಿ ನನ್ನ ತಂದೆ ಬೆಳೆಯಲಿಲ್ಲ, ಅವರು ತಮ್ಮ ಸಾಮರ್ಥ್ಯದ ಮೂಲಕ ಬೆಳೆದವರು, ಪ್ರಜಾಪ್ರಭುತ್ವ ಅಸ್ಥಿರಗೊಳಿಸುತ್ತಿದ್ದಾರೆ ಎಂದು ನನ್ನ ತಂದೆಯನ್ನು ದೂರಬೇಡಿ, ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ, ಅವರು ಕೇವಲ ನನ್ನ ತಂದೆ ಎಂಬ ಕಾರಣಕ್ಕೆ ನಾನು ಈ ಮಾತನ್ನು ಹೇಳುತ್ತಿಲ್ಲ, ಅವರು ಯಾವಾಗಲೂ ಒಬ್ಬ ರೈತನಾಗಿ ಗುರುತಿಸಿಕೊಳ್ಳಲು ಬಯಸುತ್ತಾರೆ ಎಂದು ಹೇಳಿದ ಕುಮಾರಸ್ವಾಮಿ ಜೆಡಿಎಸ್ ಸರ್ವೋಚ್ಚ ನಾಯಕ ಎಚ್.ಡಿ ದೇವೇಗೌಡ ಅವರನ್ನು ಸಮರ್ಥಿಸಿಕೊಂಡರು.
ತಮ್ಮ ಪತ್ನಿ, ಹಾಗೂ ಪುತ್ರನ ಬಗ್ಗೆಯೂ ಕುಮಾರಸ್ವಾಮಿ ಸದನದಲ್ಲಿ ಮಾತನಾಡಿದರು. "2004ರಲ್ಲಿ ಅನಿವಾರ್ಯವಾಗಿ ನಾನು ರಾಜಕೀಯವಾಗಿ ಬಂದವನು ನಾನು, ನನ್ನ ಪತ್ನಿಗೆ ನಾನು ರಾಜಕೀಯಕ್ಕೆ ಬರುವುದು ಇಷ್ಟವಿರಲಿಲ್ಲ, ನನಗೇನೂ ಸಿಎಂ ಆಗುವ ಆಸೆಯಿರಲಿಲ್ಲ. ಅಂದು ಬಿಜೆಪಿ ಜೊತೆ ಹೋದದ್ದು ದೊಡ್ಡ ತಪ್ಪು, ನನ್ನ ರಾಜಕೀಯ ಜೀವನದ ದೊಡ್ಡ ತಪ್ಪು" ಎಂದರು.