ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ 15ನೇ ವಿಧಾನಸಭೆಯಲ್ಲಿ ವಿಶ್ವಾಸಮತ ಕಳೆದುಕೊಂಡಿದೆ. 14 ತಿಂಗಳುಗಳ ಕಾಲ ಸರ್ಕಾರ ನಡೆಸಲು ಸಹಕಾರ ನೀಡಿದ ಎಲ್ಲರಿಗೂ ಸದನದ ಒಳಗೆ-ಹೊರಗೆ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ವಿದಾಯ ಭಾಷಣದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯಪಾಲ ವಜುಭಾಯಿವಾಲಾ ಅವರಿಗೆ ರಾಜೀನಾಮೆ ಸಲ್ಲಿಸಿರುವ ಕುಮಾರಸ್ವಾಮಿ ಈಗ ಹಂಗಾಮಿ ಸಿಎಂ. 14 ತಿಂಗಳುಗಳ ಕಾಲ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ತಮ್ಮ ವಿದಾಯ ಭಾಷಣದಲ್ಲಿ ಆಕಸ್ಮಿಕವಾಗಿ ರಾಜಕೀಯ ಪ್ರವೇಶ, ಸಾಂದರ್ಭಿಕ ಶಿಶುವಾಗಿದ್ದು, ನಿರಂತರ ನಿಂದನೆಯ ನಡುವೆ ಕಲಿತ ಪಾಠ, ಅನುಭವವನ್ನು ಸದನದ ಮುಂದಿಟ್ಟರು. ಪ್ರಮುಖವಾಗಿ, "ನಾನು ವಚನ ಭ್ರಷ್ಟನಲ್ಲ" ಎಂದು ಮೂರು ಬಾರಿ ಒತ್ತಿ ಹೇಳಿದರು.
ಸಮ್ಮಿಶ್ರ ಸರ್ಕಾರದಲ್ಲಿ ತಮಗಿರುವ ಇತಿಮಿತಿಗಳ ಬಗ್ಗೆ ಪ್ರಸ್ತಾಪಿಸಿದ್ದ ಸಿಎಂ 14 ತಿಂಗಳಲ್ಲಿ ತಮ್ಮ ನಾಯಕತ್ವದಲ್ಲಿ ಮಾಡಿದ ಸಾಧನೆಗಳ ವಿವರಣೆಯನ್ನು ಬಿಚ್ಚಿಟ್ಟರು. ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಂತ್ರಸ್ತನಂತಾಗಿದ್ದೆ, ನನ್ನನ್ನು ಹಾಸ್ಯದ ವಸ್ತುವನ್ನಾಗಿ ಬಳಸಿಕೊಳ್ಳಲಾಗಿತ್ತು ಎಂದು ಬೇಸರ ವ್ಯಕ್ತ ಪಡಿಸಿದರು.
ಮಂಗಳವಾರ ವಿದಾಯ ಭಾಷಣದಲ್ಲಿ ಸುಮಾರು 2 ಗಂಟೆಗಳ ಕಾಲ ಮಾತನಾಡಿದ ಕುಮಾರಸ್ವಾಮಿ, ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡರು., ಸಾಧನೆಗಳ ಪಟ್ಟಿಯನ್ನು ಬಿಚ್ಚಿಟ್ಟರು. ಅತೃಪ್ತ ಶಾಸಕರ ಅರೋಪಗಳಿಗೆ ತಿರುಗೇಟು ಕೊಟ್ಟ ಕುಮಾರಸ್ವಾಮಿ, ವಿಶ್ವಾಸ ಮತ ಯಾಚನೆ ಮುಂದೂಡಲು ಕಾರಣ ಬಿಚ್ಚಿಟ್ಟರು, ಸ್ವಲ್ಪ ದಿನ ಮುಂದೂಡಿದರೇ ಅತೃಪ್ತ ಶಾಸಕರು ವಾಪಸ್ ಬರಬಹುದು ಎಂಬುದರ ಜೊತೆಗೆ ಸ್ವಲ್ಪವೂ ಸ್ವಾರ್ಥವೂ ಇತ್ತು ಎಂದು ಹೇಳಿದ್ದಾರೆ. "ನಾನು ವಚನ ಭ್ರಷ್ಟನಲ್ಲ" ಎಂದು ಮೂರು ಬಾರಿ ಒತ್ತಿ ಹೇಳಿದರು.
ಅನುದಾನ ನೀಡಿಲ್ಲ ಎಂದು ಈ ಸರದ ವಿರುದ್ಧ ಬಂಡಾಯ ಸಾರಿರುವ ಅತೃಪ್ತ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಅನುದಾನ ವಿವರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಸದನದಲ್ಲೇ ಅನಾವರಣಗೊಳಿಸಿದರು.
ಅತೃಪ್ತರಿಗೆ ನೀಡಿದ ಅನುದಾನ ವಿವರ ಇಂತಿದೆ.
ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ- 262 ಕೋಟಿ ರೂ, ಮಹೇಶ್ ಕುಮಠಳ್ಳಿ- 157 ಕೋಟಿ ರೂ, ಆನಂದ್ ಸಿಂಗ್- 179 ಕೋಟಿ ರೂ, ಡಾ.ಕೆ.ಸುಧಾಕರ್- 136 ಕೋಟಿ ರೂ., ಬಿ.ಸಿ.ಪಾಟೀಲ್- 142 ಕೋಟಿ ರೂ. ಆರ್.ಶಂಕರ್- 113 ಕೋಟಿ ರೂ. ನಾಗೇಶ್- 307 ಕೋಟಿ ರೂ. ಪ್ರತಾಪ್ಗೌಡ ಪಾಟೀಲ್- 517 ಕೋಟಿ ರೂ, ಶಿವರಾಂ ಹೆಬ್ಬಾರ್- 413 ಕೋಟಿ ರೂ. ಎಂ.ಟಿ.ಬಿ.ನಾಗರಾಜ್- 132 ಕೋಟಿ ರೂ, ಭೈರತಿ ಬಸವರಾಜ್- 339 ಕೋಟಿ ರೂ. ಮುನಿರತ್ನ - 559 ಕೋಟಿ ರೂ. ಎಸ್.ಟಿ.ಸೋಮಶೇಖರ್- 415 ಕೋಟಿ ರೂ. ಎಚ್.ವಿಶ್ವನಾಥ್- 304 ಕೋಟಿ ರೂ. ನಾರಾಯಣಗೌಡ - 472 ಕೋಟಿ ರೂ. ಗೋಪಾಲಯ್ಯ- 416 ಕೋಟಿ ರೂ ಅನುದಾನ ನೀಡಿರುವುದಾಗಿ ಕುಮಾರಸ್ವಾಮಿ ವಿವರಿಸಿದ್ದಾರೆ.