ಬೆಂಗಳೂರು: ತಮಗೆ ಶುಭಕೋರಲು ಬರುವ ಅಭಿಮಾನಿಗಳು, ಕಾರ್ಯಕರ್ತರು ಹೂಗುಚ್ಛ, ಹಾರ, ಶಾಲುಗಳಿಗಾಗಿ ಹಣ ವೆಚ್ಚಮಾಡುವುದು ಬೇಡ ಎಂದು ನೂತನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಉಡುಗೊರೆ ಬೇಡ, ನಿಮ್ಮ ಹಾರೈಕೆಯೇ ನನಗೆ ದೊಡ್ಡ ಉಡುಗೊರೆ ಎಂದು ಬಿಎಸ್ ವೈ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.
ತಮ್ಮನ್ನು ಭೇಟಿ ಮಾಡಿ ಶುಭಕೋರಲು ರಾಜ್ಯದ ಮೂಲೆ ಮೂಲೆಯಿಂದ ಅಭಿಮಾನಿಗಳು, ಕಾರ್ಯಕರ್ತರು ಬರುವುದನ್ನು ಕಂಡು ತಮಗೆ ಸಂತೋಷವಾಗಿದೆ. ಆದರೆ, ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ, ಇಂತಹ ಸಂದರ್ಭದಲ್ಲಿ ಹೂಗುಚ್ಚ, ಹಾರ, ಶಾಲುಗಳ ಖರೀದಿಸಲು ವೆಚ್ಚ ಮಾಡುವುದು ಬೇಡ ಎಂದು ಮನವಿ ಮಾಡಿರುವ ಯಡಿಯೂರಪ್ಪ , ಅಭಿಮಾನಿಗಳು, ಕಾರ್ಯಕರ್ತರ ಹಾರೈಕೆಯೇ ತಮಗೆ ಬಹುದೊಡ್ಡ ಉಡುಗೊರೆ ಎಂದು ಹೇಳಿದ್ದಾರೆ.