ಹುಬ್ಬಳ್ಳಿ: 2019ರ ಲೋಕಸಭೆ ಚುನಾವಣೆ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಸ್ವಲ್ಪ ಮಟ್ಟಿನ ಅದೃಷ್ಟ ಹೊತ್ತು ತಂದಿದೆ. ಒಂದು ಲಕ್ಷ ಮತಗಳ ಅಂತರದಿಂದ ಗೆದ್ದಿರುವ ಜೋಶಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಜೊತೆಗೆ ಕಲ್ಲಿದ್ದಲು ಖಾತೆಯ ಹೊಣೆಗಾರಿಕೆಯನ್ನು ಜೋಶಿ ಅವರಿಗೆ ನೀಡಲಾಗಿದೆ, ಮೊದಲ ಬಾರಿಗೆ ಕೇಂದ್ರ ಸಚಿವರಾಗಿರುವ ಜೋಶಿ ಅವರ ಮೇಲೆ ಅಪಾರ ಜವಾಬ್ದಾರಿಯಿದೆ. ಜೋಶಿ ಅವರನ್ನು ರಾಜ್ಯ ಸಚಿವರನ್ನಾಗಿ ನೇಮಕ ಮಾಡಬಹುದೆಂದು ಊಹಿಸಿಕೊಂಡಿದ್ದವರಿಗೆ ಅಚ್ಚರಿ ಕಾದಿತ್ತು, ಏಕೆಂದರೆ ಮೋದಿ ಅವರ ಟೀಂ ನಲ್ಲಿ ಪ್ರಹ್ಲಾದ್ ಜೋಶಿ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ದೊರೆತಿದೆ.
ಸಂಸತ್ತನ್ನು ನಡೆಸುವ ಮಹತ್ವದ ಜವಾಬ್ದಾರಿ ಅವರ ಹೆಗಲ ಮೇಲಿದೆ, ಅದಕ್ಕಾಗಿ ಅವರು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ, ತಮಗೆ ವಹಿಸಿರುವ ಹೊಣೆಗಾರಿಕೆಯನ್ನು ನಿಬಾಯಿಸಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಿದ್ಧಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ತಮ್ಮ ರಾಜಕೀಯ ಗುರು ದಿವಂಗತ ಅನಂತ್ ಕುಮಾರ್ ಅವರು ನಿರ್ವಹಿಸಿದ್ದ ಖಾತೆಯ ಹೊಣೆಗಾರಿಕೆ ಜೋಶಿ ಅವರಿಗೆ ಬಂದಿದೆ, ಸಂಸತ್ತಿನಲ್ಲಿ ಎಲ್ಲಾ ಪಕ್ಷಗಳ ಮುಖಂಡರನ್ನು ಸಂಭಾಳಿಸಿ ಸದನ ಸುಗಮವಾಗಿ ನಡೆಯುವಂತೆ ಮಾಡುವ ಚತುರತೆ ಜೋಶಿ ಅವರಿಗಿದೆ.ಜೋಶಿ ಅವರಿಗೆ ಕಲ್ಲಿದ್ದಲು ಖಾತೆ ಸಿಕ್ಕಿರುವುದರಿಂದ ರಾಜ್ಯಕ್ಕೆ ಹೆಚ್ಚಿನ ಲಾಭವಾಗುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಉತ್ದಾದನೆಯಲ್ಲಿ ಆಗುತ್ತಿರುವ ತೊಂದರೆ ತಪ್ಪಬಹುದು ಎಂದು ನಿರೀಕ್ಷಿಸಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಲು ಇದು ಸೂಕ್ತ ಸಮಯವಲ್ಲ ಎಂದು ಹೇಳಿರುವ ಜೋಶಿ, ಈ ಸಮಸ್ಯೆ ಬಗ್ಗೆ ಪೂರ್ಣವಾಗಿ ಅಧ್ಯಯನ ನಡೆಸಿ ನಂತರ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಅವರ ಸಂಪುಟ ಸೇರಿರುವುದರಿಂದ ನನಗೆ ಬಹುದೊಡ್ಡ ಜವಾಬ್ದಾರಿ ಬಂದಿದೆ, ಇದಕ್ಕಾಗಿ ನಾನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಿದ್ಧತೆ ನಡೆಸುತ್ತಿದ್ದೇನೆ.
ನನ್ನನ್ನು ಪರಿಗಣಿಸಿ ಪ್ರಧಾನಿ ನನಗೆ ಈ ಖಾತೆ ನೀಡಿದ್ದಾರೆ, ಹೀಗಾಗಿ ನನಗೆ ಈ ಖಾತೆ ಬಗ್ಗೆ ಯಾವುದೇ ಬೇಸರವಿಲ್ಲ, ಇದು ನನಗೆ ಹೊಸ ರೀತಿಯ. ಅನುಭವ, ಸದನ ನಾಯಕರ ಸಮನ್ವಯ, ಸಹಕಾರ ಪಡೆಯಬೇಕು. ಕಲ್ಲಿದ್ದಲು ಮತ್ತು ಗಣಿ ಖಾತೆಯ ತೊಡಕುಗಳ ಬಗ್ಗೆ ನನಗೆ ಹೆಚ್ಚಿಗೆ ತಿಳಿದಿಲ್ಲ, ಅದನ್ನೆಲ್ಲಾ ತಿಳಿದುಕೊಂಡ ನಂತರ ನಾನು ಮುಂದಿನ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos