ರಾಜಕೀಯ

ಸ್ಥಳೀಯ ಸಂಸ್ಥೆ ಎಫೆಕ್ಟ್: ಸರ್ಕಾರ ಉರುಳಿಸಲು ಯತ್ನಿಸಿದ್ದ ಬಿಜೆಪಿಗೂ ಬೇಕಿಲ್ಲ ಮಧ್ಯಂತರ ಚುನಾವಣೆ!

Shilpa D
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷಗಳಾಗದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಎಷ್ಟೇ ಒಳಜಗಳಗಳು ತಾರಕಕ್ಕೇರಿದ್ದರೂ ಬುಧವಾರ ಸಂಪುಟ ವಿಸ್ತರಣೆಗೆ ಸಮಯ ಫಿಕ್ಸ್ ಮಾಡಲಾಗಿದೆ. ಕಾಂಗ್ರೆಸ್ ಅತೃಪ್ತ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ಮೈತ್ರಿ ಸರ್ಕಾರ ಉರುಳಿಸಲು ಯತ್ನಿಸುತ್ತಿದ್ದ ಬಿಜೆಪಿ ಕೂಡ ಎರಡು ಹೆಜ್ಜೆ ಹಿಂದೆ ಸರಿದಿದೆ. ಇತ್ತೀಚೆದೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ  ಸ್ಪಷ್ಟ ಬಹುಮತ ದೊರೆತಿದೆ , ಒಂದು ವೇಳೆ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದರೇ ಬಿಜೆಪಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಲಾಗುತ್ತಿದೆ.
ಆದರೆ ನೈಜ ಚಿತ್ರವೇ ಬೇರೆಯೇ ಇದೆ, ಕಾಂಗ್ರೆಸ್, ಜೆಡಿಎಸ್ ಮಾತ್ರವಲ್ಲ ಬಿಜೆಪಿಗೂ ಕೂಡ ಮಧ್ಯಂತರ ಚುನಾವಣೆ ಬೇಕಿಲ್ಲ, ಕಾರಣ ಹಣಕಾಸು ಪರಿಸ್ಥಿತಿ ಎಂದು ಮೂಲಗಳು ತಿಳಿಸಿವೆ,. ಲೋಕಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಸುಮಾರು 170 ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲ್ಲಬಹುದೆಂದು ಬಿಜೆಪಿ ಲೆಕ್ಕಾಚಾರ ಹಾಕಿತ್ತು, ಆದರೆ ಲೋಕಸಭೆ ಚುನಾವಣೆ ನಂತರ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ವ್ಯತಿ ರಿಕ್ತವಾಗಿ  ಬಂದಿರುವ ಕಾರಣದಿಂದಾಗಿ ಮತ್ತೆ ವಿಧಾನಸಭೆ ಚುನಾವಣೆಗೆ ಹೋಗುವುದು ಎಷ್ಟು ಸರಿ ಎಂಬ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಸದ್ಯ ನಮ್ಮಲ್ಲಿ 105 ಶಾಸಕರಿದ್ದಾರೆ, ಒಂದು ವೇಳೆ ಮಧ್ಯಂತರ ಚುನಾವಣೆ ಎದುರಾದರೇ 105 ಸೀಟುಗಳಲ್ಲಿ ಮತ್ತೆ ಗೆಲ್ಲುತ್ತೇವೆ ಎಂಬ ವಿಶ್ವಾಸ ಬಿಜೆಪಿಗಿಲ್ಲ ಎಂದು ಪದಾಧಿಕಾರಿಯೊಬ್ಬರು ಹೇಳಿದ್ದಾರೆ, ನಮ್ಮ ಶಾಸಕರು ಸದ್ಯ ಅವರ ಸ್ಥಾನಗಳಲ್ಲಿ ಸ್ಥಿರವಾಗುತ್ತಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಮೇಲೆ ಜನರಿಗೆ ಅನುಕಂಪ ಬರುವ ಸಾಧ್ಯತೆಯಿದ್ದು,  ಹಲವು ಶಾಸಕರಿಗೆ ಮತ್ತೆ ಗೆಲ್ಲುವ ವಿಶ್ವಾಸವಿಲ್ಲ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಆಂತರಿಕ ಕಚ್ಚಾಟದ ಕಾರಣ ಸದ್ಯಕ್ಕೆ ಸರ್ಕಾರ ಉರುಳಿಸುವ ಪ್ರಯತ್ನ ಬೇಡ ಎಂದು ಹೈಕಮಾಂಡ್ ಸೂಚಿಸಿದೆ. ಇನ್ನೂ ಲೋಕಸಭೆ ಚುನಾವಣೆಯಲ್ಲಿ ಘಟಾನುಘಟಿ ನಾಯಕರುಗಳಾದ ಮಾಜಿ ಪ್ರಧಾನಿ ಎಚ್,ಡಿ ದೇವೇಗೌಡ ಮತ್ತು ಮಲ್ಲಿಕಾರ್ಜುನ ಖರ್ಗೆ ಯಂತವರೇ ಸೋತಿದ್ದಾರೆ. ಹೀಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಗೆ ಅನುಕಂಪ ಅಲೆ ಲಾಭವಾಗುತ್ತದೆ ಎಂಬುದನ್ನು ಅರಿತಿರುವ ಬಿಜೆಪಿ, ಆಪರೇಷನ್ ಕಮಲದಿಂದ ಹಿಂದೆ ಸರಿಯಲು ನಿರ್ಧರಿಸಿದೆ. 
SCROLL FOR NEXT