ಬೆಂಗಳೂರು: ಜೆಡಿಎಸ್ ರಾಜ್ಯಧ್ಯಕ್ಷ ಹುದ್ದೆಗೆ ನೀಡಿರುವ ರಾಜಿನಾಮೆಯನ್ನು ಅಂಗೀಕರಿಸದಿದ್ದರೇ ಹುಣಸೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಹಲವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ನಿಭಾಯಿಸಿದ್ದರು, ಹೀಗಾಗಿ ಸಿಎಂ ಕುಮಾರಸ್ವಾಮಿ ಅವರೇ ಜೆಡಿಎಸ್ ರಾಜ್ಯಾಧ್ಯಕ್ಷರಾಗಲಿ ಎಂದು ಸಲಹೆ ನೀಡಿದ್ದಾರೆ.
ನಾನು ಇದುವರೆಗೂ ಮಂತ್ರಿ ಸ್ಥಾನ ನೀಡುವಂತೆ ಯಾರ ಮನೆ ಬಾಗಿಲಿಗೂ ಹೋಗಿಲ್ಲ, ನನಗೆ ಮಂತ್ರಿಯಾಗಬೇಕೆಂಬ ಆಸೆ, ಅವಸರ ಇಲ್ಲ, ಸಮ್ಮಿಶ್ರ ಸರ್ಕಾರದಲ್ಲಿ ಬರುವ ಸವಾಲುಗಳನನ್ನು ಎದುರಿಸಲು ಮುಖ್ಯಮಂತ್ರಿ ಪಕ್ಕ ನಿಂತು ಬಗೆಹರಿಸಲು ಬಯಸುತ್ತೇನೆ, ಆದರೆ ಕುಮಾರಸ್ವಾಮಿ ಆಗಲಿ ಅಥವಾ ಸಿದ್ದರಾಮಯ್ಯ ಅವರಾಗಲಿ ನನ್ನ ಅನುಭವವನ್ನು ಉಪಯೋಗಿಸಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಇನ್ನೂ ಪ್ರಾಥಮಿಕ ಶಿಕ್ಷಣ ಇಲಾಖೆಗೆ ಸಚಿವರನ್ನು ನೇಮಿಸದೆ ಶಿಕ್ಷಣ ಇಲಾಖೆ ಬಗ್ಗೆ ಸಿಎಂ ಉದಾಸೀನ ತೋರುತ್ತಿದ್ದಾರೆ,. ಬಹುದೊಡ್ಡ ಮಾನವ ಸಂಪನ್ಮೂಲ ತಯಾರು ಮಾಡುವ ಶಿಕ್ಷಣ ಇಲಾಖೆಯನ್ನು ನಿರ್ಲಕ್ಷಿಸಿದರೇ ಸರ್ಕಾರಕ್ಕೆ ಉಳಿಗಾಲವಿಲ್ಲ, ಹೀಗಾಗಿ ಸಿಎಂ ಈ ವಿಷಯವನ್ನು ಗಂಭೀರವಾಗೆ ಪರಿಗಣಿಸಬೇಕು ಎಂದು ವಿಶ್ವನಾಥ್ ಸಲಹೆ ನೀಡಿದ್ದಾರೆ. ಜೊತೆಗೆ ಜೆಡಿಎಸ್ ಪಾಲಿಗಿರುವ ಸಚಿವ ಸ್ಥಾನವನ್ನು ತುಂಬಬೇಕು, ಹಾಗೂ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶಾಸಕರಿಗೆ ಇನ್ನೂ ಖಾತೆ ಹಂಚಿಕೆ ಮಾಡದೇ ಅವಮಾನ ಮಾಡುತ್ತಿದ್ದಾರೆ, ಕೂಡಲೇ ಅವರಿಗೆ ಖಾತೆ ಹಂಚಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.
ಇನ್ನೂ ರೋಷನ್ ಬೇಗ್ ಅಮಾನತು ಬಗ್ಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ರೋಷನ್ ಬೇಗ್ ನಾನು ಕಾಂಗ್ರೆಸ್ ಪಕ್ಷಕ್ಕಾಗಿ ಹಲವಾರು ವರ್ಷ ದುಡಿದಿದ್ದೇವೆ, ಅವರನ್ನು ಅಮಾನತುಗೊಳಿಸುವ ಮೂಲಕ ಅಲ್ಪ ಸಂಖ್ಯಾತ ಸಮುದಾಯದರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ, ಕಾಂಗ್ರೆಸ್ 80 ಸೀಟು ಪಡೆಯಲು ಶೇ.90 ರಷ್ಟು ಮುಸ್ಲಿಂಮರ ಪಾತ್ರವಿದೆ ಎಂದು ಹೇಳಿದ್ದಾರೆ.
ನಾನು ಕಾಂಗ್ರೆಸ್ ನಲ್ಲಿದ್ದಾಗ ಸಿದ್ದರಾಮಯ್ಯ ಇದೇ ಅಸ್ತ್ರ ಪ್ರಯೋಗಿಸಿದ್ದರು, ಅವರು ನನ್ನನ್ನು ಸಸ್ಪೆಂಡ್ ಮಾಡುವ ಮೊದಲೇ ನಾನು ರಾಜಿನಾಮೆ ನೀಡಿದೆ, ದ್ವೇಷಕ್ಕಾಗಿ ಬೆಳೆದಿರುವ ನಾಯಕರನ್ನು ಭವಿಷ್ಯವನ್ನು ಹಾಳು ಮಾಡಬಾರದು ಎಂದು ಸಿದ್ದರಾಮಯ್ಯ ವಿರುದ್ಧ ನೇರ ಆರೋಪ ಮಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos