ಬೆಂಗಳೂರು: ಆಡಳಿತಾರೂಢ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿರುವ ಸಂದರ್ಭದಲ್ಲಿಯೇ ಈ ಜವಾಬ್ದಾರಿ ತೊರೆದಿರುವ ಹೆಚ್.ವಿಶ್ವನಾಥ್, ತಮ್ಮ ಉತ್ತರಾಧಿಕಾರಿಯಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಎಸ್.ಮಧುಬಂಗಾರಪ್ಪ ಅವರ ಹೆಸರನ್ನು ಸೂಚಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಕ್ಕೆ ಪಕ್ಷದಲ್ಲಿ ಹೆಚ್ಚು ಮನ್ನಣೆ ಸಿಗಬೇಕಿದೆ. ಈ ವರ್ಗಕ್ಕೆ ಸೇರಿರುವ ಮಧುಬಂಗಾರಪ್ಪ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಜೆಡಿಎಸ್ ನಾಯಕರು ಮಧುಬಂಗಾರಪ್ಪ ಅವರಿಗೆ ಪಕ್ಷದ ಸಾರಥ್ಯ ನೀಡಿದಲ್ಲಿ ತಾವೇ ಮುಂದೆ ನಿಂತು ಹೊಸ ಅಧ್ಯಕ್ಷರಿಗೆ ಪಕ್ಷದ ಧ್ವಜವನ್ನು ಹಸ್ತಾಂತರ ಮಾಡುವುದಾಗಿ ಹೇಳಿದ್ದಾರೆ.
ಒಂದು ಕಡೆ ಪಕ್ಷ ಸಂಘಟನೆಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಚಾಲನೆ ನೀಡಿದ್ದು, ಜೆಡಿಎಸ್ ರಾಜ್ಯ ಘಟಕಕ್ಕೆ ಸಾರಥಿಯ ನೇಮಕದ ಬಗ್ಗೆ ಇನ್ನೂ ನಿಗೂಢತೆಯನ್ನು ಕಾಯ್ದುಕೊಂಡಿದ್ದಾರೆ. ಶಾಸಕ ಹೆಚ್.ವಿಶ್ವನಾಥ್, ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದ್ದರೂ ಅದನ್ನು ಸ್ವೀಕರಿಸಲು ದೇವೇಗೌಡರು ಇನ್ನೂ ಮನಸು ಮಾಡಿಲ್ಲ. ಹೀಗಾಗಿ ಜೆಡಿಎಸ್ ರಾಜ್ಯ ಘಟಕದ ಚುಕ್ಕಾಣಿ ಹಿಡಿಯುವವರು ಯಾರು ಎಂಬ ಪ್ರಶ್ನೆ ಉದ್ಭವಾಗಿರುವ ಸಂದರ್ಭದಲ್ಲಿಯೇ ವಿಶ್ವನಾಥ್, ನೀಡಿರುವ ಸಲಹೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಸಚಿವ ಬಂಡೆಪ್ಪ ಖಾಶಂಪೂರ ಅವರ ಹೆಸರು ಸಹ ಕೇಳಿಬಂದಿತ್ತು. ಪಕ್ಷದಲ್ಲಿ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣ ನೀಡಿ ವಿಶ್ವನಾಥ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಬಳಿಕ ಸದ್ಯಕ್ಕೆ ಪಕ್ಷದ ನೇತೃತ್ವ ವಹಿಸಲು ಯಾರೂ ಸಹ ಮುಂದೆ ಬರುತ್ತಿಲ್ಲವಾದ್ದರಿಂದ ವಿಶ್ವನಾಥ್ ಅವರನ್ನೇ ಮುಂದುವರೆಸಲು ದೇವೇಗೌಡರು ಒತ್ತಡ ಹೇರುತ್ತಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಧುಬಂಗಾರಪ್ಪ ಅವರ ಹೆಸರು ಕೇಳಿಬಂದಿದೆಯಾದರೂ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ಈ ಸಂಬಂಧ ಯುಎನ್ಐ ಕನ್ನಡ ಸುದ್ದಿಸಂಸ್ಥೆ ಮಧುಂಗಾರಪ್ಪ ಅವರನ್ನು ಸಂಪರ್ಕಿಸಿದಾಗ, ಅವರು ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಇಚ್ಛಿಸಲಿಲ್ಲ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ವಿಶ್ವನಾಥ್ ಅವರನ್ನೇ ಕೇಳುವುದು ಸೂಕ್ತ ಎಂದಷ್ಟೇ ಹೇಳಿದರು.