ಬೆಂಗಳೂರು: ಕಳೆದೊಂದು ವಾರದಿಂದ ಗ್ರಾಮವಾಸ್ತವ್ಯ, ಅಭಿವೃದ್ಧಿ ಕುರಿತ ಸಭೆ, ಸಮಾರಂಭಗಳಲ್ಲಿ ನಿರತರಾಗಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಮ್ಮ ಕೆಲಸಕ್ಕೆ ಒಂದು ವಾರ ಬಿಡುವು ನೀಡಲಿದ್ದು, ನಾಳೆಯಿಂದ ಅಮೆರಿಕ ಪ್ರವಾಸಕ್ಕೆ ತೆರಳಲಿದ್ದಾರೆ.
ಪ್ರಸ್ತುತ ಬೀದರ್ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಜಳಂಬ ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ಕುಮಾರಸ್ವಾಮಿ ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾಗಲಿದ್ದು, ರಾತ್ರಿ ಅಮೆರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ.
ಕಳೆದ ಶುಕ್ರವಾರ ಯಾದಗಿರಿಯ ಚಂಡರಕಿಯಿಂದ ಮೊದಲ ಗ್ರಾಮವಾಸ್ತವ್ಯ ನಡೆಸಿದ ಅವರು, ಬಳಿಕ ರಾಯಚೂರಿನ ಕೆರೇಗುಡ್ಡ ಪ್ರವಾಸ ಕೈಗೊಂಡರು. ಇಂದು ಬೀದರ್ನ ಉಜಳಂಬದಲ್ಲಿ ಜನರ ಸಮಸ್ಯೆಯನ್ನು ಆಲಿಸಿದರು.
ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಕುಮಾರಸ್ವಾಮಿ ಅವರಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಜೊತೆಯಾಗಲಿದ್ದಾರೆ. ಒಂದು ವಾರಗಳ ಕಾಲ ಪ್ರವಾಸ ಕೈಗೊಳ್ಳಲಿರುವ ಮುಖ್ಯಮಂತ್ರಿ ಜೊತೆ ಕೆಲವು ಅಧಿಕಾರಿಗಳು ಕೂಡ ಅವರೊಟ್ಟಿಗೆ ತೆರಳಲಿದ್ದಾರೆ. ದೇವೇಗೌಡರು ಎರಡು ದಿನಗಳ ಮಟ್ಟಿಗೆ ಅಮೆರಿಕದಲ್ಲಿದ್ದು, ಬಳಿಕ ರಾಜಧಾನಿಗೆ ಹಿಂದಿರುಗಲಿದ್ದಾರೆ.
ಅಮೆರಿಕದಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಕುಮಾರಸ್ವಾಮಿ, ದೇವೇಗೌಡರು. ಸಚಿವ ಡಿ ಕೆ ಶಿವಕುಮಾರ್ ಸೇರಿದಂತೆ ಒಕ್ಕಲಿಗ ಸಚಿವರು, ಶಾಸಕರಿಗೆ ಆಹ್ವಾನ ನೀಡಲಾಗಿದೆ. ಅಮೆರಿಕಾಗೆ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಶ್ರೀಗಳು, ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.