ಬೆಂಗಳೂರು: ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್ ಗೆ ಕೆಪಿಸಿಸಿ ನೊಟೀಸ್ ಜಾರಿ ಮಾಡಿದೆ.
ಜೂನ್ 26 ರಂದು ಹಗರಿಬೊಮ್ಮನಹಳ್ಳಿಯಲ್ಲಿ ಸಾರ್ವಜನಿಕರ ಮುಂದೆ ಸ್ವಪಕ್ಷದ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ವಿರುದ್ಧ ಆಕ್ರೋಶ ಹೊರಹಾಕಿದ್ದ ಭೀಮಾ ನಾಯ್ಕ್, ಹಗರಿಬೊಮ್ಮನಹಳ್ಳಿಯ ಮಾಲವಿ ಜಲಾಶಯಕ್ಕೆ ರಾಜವಾಳ ಬಳಿ ಇಂಟೇಕ್ ಚಾನೆಲ್ ನಿರ್ಮಿಸಲು ಸಚಿವರು ಅಡ್ಡಪಡಿಸುತ್ತಿದ್ದಾರೆ. ಕಮಿಷನ್ ಆಸೆಗೆ ಏನು ಬೇಕಾದರೂ ಮಾಡಲು ಸಿದ್ಧರಿರುವ ಪರಮೇಶ್ವರ್ ನಾಯ್ಕ್, ಒಬ್ಬ ನಾಲಾಯಕ್ ಸಚಿವ ಎಂದು ತಮ್ಮದೇ ಪಕ್ಷದ ಸಚಿವರ ವಿರುದ್ಧ ಟೀಕಾ ಪ್ರಹಾರ ಮಾಡಿದ್ದರು.
ಈ ಸಂಬಂಧ ಭೀಮಾನಾಯ್ಕ್ ಗೆ ಗುರುವಾರ ನೋಟಿಸ್ ನೀಡಿರುವ ಕೆಪಿಸಿಸಿ, ಸಚಿವರ ವಿರುದ್ಧದ ಹೇಳಿಕೆಯನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಗಂಭೀರವಾಗಿ ಪರಿಗಣಿಸಿದೆ. ಪಕ್ಷದ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡು ಬಹಿರಂಗ ಹೇಳಿಕೆಗಳನ್ನು ನೀಡಿದ್ದನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಕ್ರಮಕೈಗೊಳ್ಳಲು ಪಕ್ಷ ಚಿಂತನೆ ನಡೆಸಿದೆ. ಹೀಗಾಗಿ ತಮ್ಮ ಹೇಳಿಕೆ ಕುರಿತು ಒಂದು ವಾರದೊಳಗೆ ಸಮಜಾಯಿಷಿ ನೀಡುವಂತೆ ನೊಟೀಸ್ ನಲ್ಲಿ ತಿಳಿಸಲಾಗಿದೆ.