ಬಾಗಲಕೋಟೆ: ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ತೀವ್ರ ಟೀಕೆಗೆ ಗುರಿಯಾಗುತ್ತಿರುವ ಜೆಡಿಎಸ್ ವರಿಷ್ಠ ದೇವೇಗೌಡರ ಮೇಲೆ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಕೂಡ ಟೀಕೆ ಮಾಡಿದ್ದಾರೆ. ದೇವೇಗೌಡರಿಗೆ 28 ಮಕ್ಕಳಿದ್ದಿದ್ದರೆ ಎಲ್ಲರನ್ನೂ ಚುನಾವಣೆಗೆ ನಿಲ್ಲಿಸುತ್ತಿದ್ದರು. ತಮಗೆ 28 ಮಕ್ಕಳು ಹುಟ್ಟಲಿಲ್ಲವಲ್ಲ ಎಂದು ಈಗ ದುಃಖಿಸುತ್ತಿರಬಹುದು ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆಯಲ್ಲಿ ನಿನ್ನೆ ಮಾತನಾಡಿದ ಅವರು, ದೇವೇಗೌಡರಿಗೆ 14 ಮಕ್ಕಳಿದ್ದಿದ್ದರೆ 14 ಸೊಸೆಯರ ಜೊತೆ 28 ಕ್ಷೇತ್ರಗಳಲ್ಲಿ ಕಣಕ್ಕಿಳಿಸುತ್ತಿದ್ದರು ಎಂದು ಹೇಳಿ ನಾನು ಅವರ ಕುಟುಂಬದ ಬಗ್ಗೆ ಮಾತನಾಡಲ್ಲ ಎಂದರು.
ಮಂಡ್ಯ ಕ್ಷೇತ್ರದ ಚುನಾವಣೆ ಬಗ್ಗೆ ಸಚಿವ ರೇವಣ್ಣ ಸುಮಲತಾ ಅವರ ಬಗ್ಗೆ ಅವಮಾನ ರೀತಿಯಲ್ಲಿ ಮಾತನಾಡಿ ಇಡೀ ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದಾರೆ, ಅವರು ಬೇಷರತ್ ಕ್ಷಮೆ ಕೇಳದಿದ್ದರೆ ಜೆಡಿಎಸ್ ಪಕ್ಷದ ತೆನೆ ಹೊತ್ತ ಮಹಿಳೆ ಚಿಹ್ನೆ ಹಾಕುವ ಅರ್ಹತೆ ಇಲ್ಲ ಎಂದರು.