ಬೆಂಗಳೂರು: ಲೋಕಸಭೆ ಸೀಟು ಹಂಚಿಕೆ ವಿಚಾರವಾಗಿ ಬೇಸರಗೊಂಡಿರುವ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್ ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ,
ತುಮಕೂರು ಲೋಕಸಭೆ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವ ಹಿನ್ನೆಲೆಯಲ್ಲಿ ಮತ್ತೊಬ್ಬ ಯೋಗ್ಯ ಒಕ್ಕಲಿಗ ನಾಯಕನಿಗೆ ಅನ್ಯಾಯವಾಗಿದೆ , ನನ್ನ ನೈತಿಕ ಬೆಂಬಲ ಯಾವಾಗಲೂ ನಿಮಗೆ ಇರುತ್ತದೆ ಎಂದು ಟ್ವೀಟ್ ಮಾಡಿರುವ ಸುಧಾಕರ್ ಮುದ್ದಹನುಮೇಗೌಡರ ಪರ ಬ್ಯಾಟಿಂಗ್ ಮಾಡಿದ್ದಾರೆ.
ಮೈತ್ರಿ ಧರ್ಮದ ಪ್ರಕಾರ ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಹೀಗಾಗಿ ಹಾಲಿ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡರಿಗೆ ಕ್ಷೇತ್ರ ಕೈ ತಪ್ಪಿದೆ, ಇದರ ಜೊತೆಗೆ ತವರು ಕ್ಷೇತ್ರ ತಮ್ಮ ಕೈ ತಪ್ಪಿದ್ದಕ್ಕೆ ಡಿಸಿಎಂ ಪರಮೇಶ್ವರ್ ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಸಂಬಂಧ ಪರಮೇಶ್ವರ್ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿ ಕ್ಷೇತ್ರವನ್ನು ಬಿಟ್ಟು ಕೊಡುವಂತೆ ಮನವಿ ಮಾಡಿದ್ದಾರೆ.
ಇದರ ನಡುವೆ ತುಮಕೂರು ಕ್ಷೇತ್ರ ಕ್ಕೆ ಮುದ್ದಹನುಮೇಗೌಡರು ಸಾಕಷ್ಟು ಅನುದಾನ ತಂದಿದ್ದಾರೆ. ಹೆಚ್ ಎ ಎಲ್ ಘಟಕ, ಇಸ್ರೋ,ರೈಲ್ವೆ ಸೇರಿದಂತೆ ಹಲವು ಯೋಜನೆಗಳನ್ನು ಕ್ಷೇತ್ರ ಕ್ಕೆ ತಂದಿದ್ದು ಅವರಿಗೆ ಮತ್ತೆ ಟಿಕೆಟ್ ನೀಡಬೇಕು ಎಂದು ಮುದ್ದಹನುಮೇಗೌಡರ ಪರ ಜಿಲ್ಲಾ ಕಾಂಗ್ರೆಸ್ ಘಟಕ ಬ್ಯಾಟಿಂಗ್ ಮಾಡಿದೆ.
ಎಲ್ಲಾ ಕಡೆಯೂ ಹಾಲಿ ಸಂಸದರಿರುವ ಕ್ಷೇತ್ರ ಕ್ಕೆ ಟಿಕೆಟ್ ನೀಡಲಾಗಿದೆ. ಆದ್ರೆ ತುಮಕೂರಿಗೆ ಟಿಕೆಟ್ ನೀಡಿಲ್ಲ. ಮುದ್ದಹನುಮೇಗೌಡ ರ ಕೊಡುಗೆ ನೋಡಿ ಟಿಕೆಟ್ ನೀಡಬೇಕು ಎಂದು ಈ ಮೂಲಕ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos