ಕಲಬುರಗಿ: ಪ್ರಧಾನಿಯಾಗುವ ಮುನ್ನ ದೇಶದ ಚೌಕಿದಾರ್ ಆಗಿರುವುದಾಗಿ ಭರವಸೆ ನೀಡಿದ್ದ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಯಾರಿಗೆ ಚೌಕಿದಾರ್ ಆಗಿದ್ದಾರೆ ಎಂದು ಪ್ರಶ್ನಿಸಿದ್ದು, ಅನಿಲ್ ಅಂಬಾನಿ, ನೀರವ್ ಮೋದಿ,ವಿಜಯ್ ಮಲ್ಯ ಅವರಿಗೆ ಕಾವಲುಗಾರರಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪರಿವರ್ತನಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, 'ಅನಿಲ್ ಅಂಬಾನಿಗೆ ಲಾಭ ಮಾಡಿಕೊಡಲು ರಫೇಲ್ ಒಪ್ಪಂದ ಮಾಡಿಕೊಂಡಿದ್ದಾರೆ. ಅದಾನಿಗೆ 6 ವಿಮಾನ ನಿಲ್ದಾಣಗಳನ್ನು ಬಿಟ್ಟುಕೊಟ್ಟಿದ್ದಾರೆ. ದೇಶದ ಜನತೆಯ ಉದ್ಯೋಗಾವಕಾಶಗಳನ್ನು ಪ್ರಧಾನಿ ಮೋದಿ ನುಂಗಿಹಾಕಿದ್ದಾರೆ' ಎಂದು ರಾಹುಲ್ ಆರೋಪಿಸಿದರು.
ರಫೇಲ್ ಒಪ್ಪಂದದ ಕುರಿತು ಸಿಬಿಐ ಮುಖ್ಯಸ್ಥರು ತನಿಖೆ ಕೈಗೊಳ್ಳಲು ನಿರ್ಧರಿಸಿದ್ದರು. ಆದರೆ, ಕಾವಲುಗಾರ ಮಧ್ಯರಾತ್ರಿ ಅವರನ್ನು ಸ್ಥಾನದಿಂದ ತೆರವುಗೊಳಿಸಿದರು. ಅವರಿಗೆ ಮತ್ತೆ ಹಿಂದಿನ ಸ್ಥಾನ ನೀಡುವಂತೆ ಸುಪ್ರೀಂಕೋರ್ಟ್ ಆದೇಶಿಸಿತು. ಮತ್ತೆ ಕಾವಲುಗಾರ ಅವರನ್ನು ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದರು ಎಂದು ರಾಹುಲ್ ಗಾಂಧಿ ಟೀಕಿಸಿದರು.
ಎಲ್ಲರ ಮುಂದೆ ಸಿಕ್ಕಿ ಹಾಕಿಕೊಂಡ ನಂತರದಲ್ಲಿ ಕಾವಲುಗಾರ, ಇಡೀ ರಾಷ್ಟ್ರದ ಎಲ್ಲರೂ ಕಾವಲುಗಾರರು ಎನ್ನುತ್ತಿದ್ದಾರೆ. ಅವರು ಸಿಕ್ಕಿಕೊಳ್ಳುವುದಕ್ಕಿಂತಲೂ ಮುನ್ನ ಅವರನ್ನು ಹೊರತುಪಡಿಸಿ ದೇಶದ ಕಾವಲುಗಾರರು ಆಗಿರಲಿಲ್ಲ. ಇಡೀ ದೇಶಕ್ಕೆ ತಿಳಿಸಿದಿದೆ ಚೌಕಿದಾರ್ ಎನ್ನುತ್ತಿದ್ದಂತೆ ಸಭಿಕರ್ ಚೋರ್ ಹೈ ಎಂದು ಪ್ರತಿಕ್ರಿಯಿಸಿದರು.