ಹಾಸನ: ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದಲೇ ಸ್ಪರ್ಧಿಸಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ಅವರ ಪುತ್ರ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಹಾಸನದಿಂದಲೇ ಸ್ಪರ್ಧಿಸುವಂತೆ ನಾನು, ಪ್ರಜ್ವಲ್ ಎಲ್ಲ ಒತ್ತಾಯಿಸುತ್ತಿದ್ದೇವೆ. ತಮ್ಮ ರಾಜಕೀಯ ಜೀವನದ 60 ವರ್ಷಗಳನ್ನು ಅವರು ಇಲ್ಲೇ ಪೂರೈಸಬೇಕು ಎಂದು ಬಯಸುತ್ತಿದ್ದೇವೆ ಎಂದರು.
ಹಾಸನದಲ್ಲಿಯೇ ಹುಟ್ಟಿ ಇಲ್ಲಿಯೇ ರಾಜಕೀಯ ಜೀವನ ಕಳೆದ ತಮ್ಮ ತಂದೆಯವರು ಇಲ್ಲಿಯೇ ಮುಂದುವರಿಯಬೇಕು, ತಮ್ಮ 60ನೇ ವರ್ಷದ ರಾಜಕೀಯವನ್ನು ಇಲ್ಲಿಯೇ ಕಳೆಯಬೇಕು ಎಂಬುದು ನಮ್ಮ ಒತ್ತಾಸೆಯಾಗಿದೆ. ಇದಕ್ಕೆ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣ, ಈ ಬಗ್ಗೆ ನಾವೆಲ್ಲರೂ ಕುಳಿತುಕೊಂಡು ಚರ್ಚೆ ಮಾಡುತ್ತೇವೆ ಎಂದರು.
ಕಳೆದ ವಾರ ಹಾಸನದಲ್ಲಿ ಹೆಚ್ ಡಿ ರೇವಣ್ಣನ ಪುತ್ರ ಪ್ರಜ್ವಲ್ ರೇವಣ್ಣ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂದು ದೇವೇಗೌಡರು ಘೋಷಣೆ ಮಾಡಿದ್ದರು. ಆದರೆ ಇದೀಗ ಮತ್ತೆ ಎಲ್ಲವೂ ಬದಲಾಗುವ ಸೂಚನೆ ಕಂಡುಬರುತ್ತಿದೆ. ಒಟ್ಟಿನಲ್ಲಿ ದೇವೇಗೌಡರ ಸ್ಪರ್ಧೆಯ ಕ್ಷೇತ್ರ ಕುತೂಹಲ ಮೂಡಿಸಿದೆ.