ಕೋಲಾರ: ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್ ಜಾಧವ್ ಅವರ ರಾಜೀನಾಮೆ ಹೊಸ ತಿರುವು ಪಡೆದುಕೊಂಡಿದೆ. ಕ್ಷೇತ್ರದ ಕೆಲವು ಮತದಾರರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಉಮೇಶ್ ಜಾಧವ್ ವಿರುದ್ಧ ದೂರು ನೀಡಿದ್ದಾರೆ. ಸ್ಪೀಕರ್ ಅವರು ಈಗಾಗಲೇ ಎಲ್ಲಾ ಪಕ್ಷಗಳಿಗೆ ಸಂಬಂಧಪಟ್ಟ ದೂರುಗಳನ್ನು ಆಲಿಸಲು ಮಾರ್ಚ್ 25ರಂದು ದಿನಾಂಕ ನಿಗದಿಪಡಿಸಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಮತದಾರರು ದೂರು ನೀಡಿರುವುದರಿಂದ ವಿಚಾರಣೆಯಲ್ಲಿ ಭಾಗವಹಿಸಲು ಅವರಿಗೊಂದು ಅವಕಾಶ ಕೊಡಬೇಕು, ಉಮೇಶ್ ಜಾಧವ್ ಕೂಡ ಈ ಬಗ್ಗೆ ತಮ್ಮ ವಿವರಣೆ ನೀಡಬಹುದು ಎಂದರು.
ಇದೊಂದು ಬಹಿರಂಗ ವಿಚಾರಣೆಯಾಗಿದ್ದು ಯಾರು ಬೇಕಾದರೂ ವಿಚಾರಣೆಯಲ್ಲಿ ಭಾಗವಹಿಸಬಹುದು. ಮತದಾರರ ದೂರಿನ ಪ್ರತಿ ಮತ್ತು ಇತರ ದಾಖಲೆಗಳು ತಮ್ಮ ಕಚೇರಿಯಿಂದ ಪಡೆಯಬಹುದಾಗಿದೆ ಎಂದರು. ತಾವು ಯಾವ ನಿರ್ಧಾರವನ್ನು ಕೂಡ ಆತುರದಿಂದ ತೆಗೆದುಕೊಳ್ಳುವುದಿಲ್ಲ, ಯಾವುದೇ ಪ್ರಭಾವ ಮತ್ತು ಒತ್ತಡಗಳಿಗೆ ಬಲಿಯಾಗುವುದಿಲ್ಲ, ಇಂತಹ ಪ್ರಕರಣಗಳು ದೇಶದಲ್ಲಿ ಬೇರೆಲ್ಲೂ ನಡೆಯದಿರುವುದರಿಂದ ಕಾನೂನು ತಜ್ಞರ ಅಭಿಪ್ರಾಯ ಪಡೆಯುವುದಾಗಿ ಹೇಳಿದರು.