ರಾಜಕೀಯ

ದೇವಸ್ಥಾನದಲ್ಲಿ ಸಿಎಂ ಎದುರಿಗೆ 'ನಿಖಿಲ್ ಎಲ್ಲಿದ್ದೀಯಪ್ಪಾ' ಎಂದು ಮುಜುಗರಗೊಂಡ ಅರ್ಚಕ!

Sumana Upadhyaya
ಕಲಬುರಗಿ: ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಕುಮಾರಸ್ವಾಮಿ ಅವರನ್ನು ವ್ಯಂಗ್ಯ ಮಾಡುವ 'ನಿಖಿಲ್ ಎಲ್ಲಿದ್ದೀಯಪ್ಪಾ' ವಾಕ್ಯ ಭಾರಿ ಟ್ರೋಲ್ ಆಗಿತ್ತು, ಎಷ್ಟರ ಮಟ್ಟಿಗೆ ಎಂದರೆ ಸ್ವತಃ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರೇ ಈ ಬಗ್ಗೆ ಮಾತನಾಡಿ ಟ್ರೋಲ್ ಮಾಡಿದವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ನಿನ್ನೆ ಕಲಬುರಗಿಯ ಅಫ್ಜಲ್ ಪುರ ತಾಲ್ಲೂಕಿನ ದೇವಳ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಸಿಎಂ ಕುಮಾರಸ್ವಾಮಿ ಪೂಜೆ ಸಲ್ಲಿಸಲು ಹೋಗಿದ್ದರು. ಆಗ ಅರ್ಚಕರೊಬ್ಬರು ಸ್ವತಃ ಕುಮಾರಸ್ವಾಮಿ ಮುಂದೆಯೇ 'ನಿಖಿಲ್ ಎಲ್ಲಿದ್ದೀಯಪ್ಪಾ' ಎಂದು ಬಿಟ್ಟಿದ್ದಾರೆ. ಅವರೊಂದಿಗೆ ಜೆಡಿಎಸ್ ಕಾರ್ಯಕರ್ತರು, ಬೆಂಬಲಿಗರು ದೇವಸ್ಥಾನಕ್ಕೆ ಹೋಗಿದ್ದರು, ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ಅರ್ಚಕರು ಅಚಾನಕ್ಕಾಗಿ 'ನಿಖಿಲ್ ಎಲ್ಲಿದ್ದೀಯ' ಎಂದು ಕರೆದಿದ್ದಾರೆ, ಇದರಿಂದ ಕೆಲ ಕಾಲ ಅಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಅರ್ಚಕ ದತ್ತಾತ್ರೆಯ ಅವರ ಮಗನ ಹೆಸರೂ ನಿಖಿಲ್ ಎಂದೇ ಆಗಿದೆ. ಆತ ಪೂಜೆಗೆ ಬೇಕಾದ ಸಾಮಗ್ರಿಯೊಂದನ್ನು ತರಲು ಹೋದವ, ಜನಜಂಗುಳಿಯ ಹಿಂದೆ ಸಿಲುಕಿಕೊಂಡಿದ್ದಾನೆ, ಅದಕ್ಕೆ ಅರ್ಚಕ ದತ್ತಾತ್ರೆಯ ಅವರು ನಿಖಿಲ್ ಎಲ್ಲಿದ್ದೀಯಾ? ಎಂದು ಜೋರಾಗಿ ಪ್ರಶ್ನಿಸಿದ್ದಾರೆ.
ಈ ವರ್ಷ ಸಿಎಂ ಕುಮಾರಸ್ವಾಮಿಯವರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಎರಡನೇ ಸಲ. ಮುಖ್ಯಮಂತ್ರಿಯವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಮಗನ ಗೆಲುವಿಗೆ ಮತ್ತು ಮೈತ್ರಿ ಸರ್ಕಾರ ಸುಗಮವಾಗಿ ಸಾಗುವಂತೆ ಕೋರಿ ಪೂಜೆ ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ.
SCROLL FOR NEXT