ರಾಜಕೀಯ

ಮೆರೆದಂತಹ ನಾಯಕರು ಎಲ್ಲವನ್ನು ಕಳೆದುಕೊಂಡು ಮೂಲೆ ಸೇರಿದ್ದಾರೆ: ಶ್ರೀರಾಮುಲು

Srinivasamurthy VN
ದಾವಣಗೆರೆ: ಕಾಂಗ್ರೆಸ್ ಹಿರಿಯ ಶಾಸಕ ರೋಷನ್ ಬೇಗ್ ಕಾಂಗ್ರೆಸ್ ನಾಯಕರ ವಿರುದ್ಧ ತಿರುಗಿ ಬಿದ್ದಿರುವುದು ಸರಿಯಾಗಿಯೇ ಇದೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಕಾಲಕ್ಕೆ ತಕ್ಕಂತೆ ತಗ್ಗಿಬಗ್ಗಿ ನಡೆಯಬೇಕು ಎಂದು ಬಿಜೆಪಿ ಶಾಸಕ ಶ್ರೀರಾಮುಲು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿರಿಯ ಶಾಸಕ ರೋಷನ್ ಬೇಗ್ ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 'ರೋಷನ್ ಬೇಗ್ ಹೇಳಿರುವ ಮಾತುಗಳು ಸರಿಯಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಹಂಕಾರ ಬೆಳೆದಿದೆ. ಅಹಂ ಅವರನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತದೆಯೋ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ರಾಜ್ಯದಲ್ಲಿ ಇಂತಹ ನಾಯಕರನ್ನು ಬಹಳಷ್ಟು ಜನರನ್ನು ನೋಡಿದ್ದೇವೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತಗ್ಗಿ ಬಗ್ಗಿ ನಡೀಬೇಕು ಬದುಕಬೇಕು ಎಂದು ಸಿದ್ದರಾಮಯ್ಯ ಅವರನ್ನು ಟೀಕಿಸಿದರು.
ಸಿದ್ದರಾಮಯ್ಯ ಅಹಿಂದ ಸಮುದಾಯವನ್ನು ಬಳಸಿಕೊಂಡು ದೊಡ್ಡ ಮಟ್ಟಕ್ಕೆ ಬೆಳೆದ ನಾಯಕ. ಅವರಿಗೆ ಅಧಿಕಾರ, ಅಹಂಕಾರ ಎಲ್ಲವೂ ಬಂದಿದೆ. ಸಿದ್ದರಾಮಯ್ಯ ಒಬ್ಬರನ್ನೇ ಈ ರಾಜ್ಯದ ಜನತೆ ನೋಡುತ್ತಿಲ್ಲ, ಸಿದ್ದರಾಮಯ್ಯನ ರೀತಿ ಮೆರೆದಂತಹ, ಉರಿದಂತಹ ನಾಯಕರುಗಳು ಎಲ್ಲಾ ಅಧಿಕಾರ, ಸ್ಥಾನಮಾನಗಳನ್ನು ಕಳೆದುಕೊಂಡಿರುವುದನ್ನು ನಾವು ನೋಡಿದ್ದೇವೆ ಎಂದು ಇತಿಹಾಸವನ್ನು ನೆನಪಿಸಿದರು.
SCROLL FOR NEXT