ಬೆಂಗಳೂರು: ದೇವೇಗೌಡರು ಹಾಸನಕ್ಕೆ ಮಾತ್ರ ಮಣ್ಣಿನ ಮಗನೇ ಹೊರತು ತುಮಕೂರಿಗಲ್ಲ. ತುಮಕೂರಿಗೆ ನಾನೇ ಮಣ್ಣಿನ ಮಗ. ವಯೋವೃದ್ಧರಾಗಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಈಗಲಾದರೂ ದ್ವೇಷದ ರಾಜಕಾರಣ ಬಿಟ್ಟು ನೆಮ್ಮದಿಯ ರಾಜಕಾರಣ ಮಾಡಲಿ ಎಂದು ತುಮಕೂರು ಕ್ಷೇತ್ರದ ನೂತನ ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ರಾಜಕಾರಣದಲ್ಲಿ ಹಲವರನ್ನು ಮುಗಿಸಿದಂತೆ ತಮ್ಮನ್ನೂ ಎರಡೂ ಬಾರಿ ರಾಜಕೀಯವಾಗಿ ಮುಗಿಸುವ ಪ್ರಯತ್ನ ಮಾಡಿದ್ದರು. ಈಗ ಆಕಸ್ಮಿಕವಾಗಿ ಅವರೇ ನನ್ನ ಕೈಗೆ ಸಿಕ್ಕಿ ಹಾಕಿಕೊಂಡರು. ಅವರಿಗೆ ಜಿಲ್ಲೆಯ ಜನರೇ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ತುಮಕೂರಿಗೆ ಹೇಮಾವತಿ ನೀರು ಹರಿಯದಂತೆ ದೇವೇಗೌಡ ಹಾಗೂ ಅವರ ಮಗ ರೇವಣ್ಣ ಜನರಿಗೆ ಮೋಸ ಮಾಡಿದ್ದು, ಅವರ ಮೋಸವೇ ಅವರಿಗೆ ತಿರುಗುಬಾಣವಾಗಿದೆ. ವಯಸಿನಲ್ಲಿ ಹಿರಿಯರಾದ ಗೌಡರು ಈಗಲಾದರೂ ಮಹಾಘಟ್ ಬಂಧನ್ ಎನ್ನುವುದನ್ನೆಲ್ಲಾ ಬಿಟ್ಟು ನೆಮ್ಮದಿಯಾಗಿರಲಿ ಎಂದು ಕಿವಿಮಾತು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಾಗೂ ದೇವೇಗೌಡರ ನಡುವೆ ಸಮರ ನಡೆದಿತ್ತು. ಕಾಂಗ್ರೆಸ್ ಪಕ್ಷದಲ್ಲಿಯೂ ತಮಗೆ ಸ್ನೇಹಿತರಿದ್ದು, ಅವರು ನನ್ನ ಗೆಲುವಿಗೆ ಸಹಕಾರ ನೀಡಿರಬಹುದೇನೋ ..ಅವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos