ರಾಜಕೀಯ

ರೇವಣ್ಣ ಮಂತ್ರ ಮಾಡಿಸಿದ್ದ ನಿಂಬೆಹಣ್ಣಿಗೆ ದೇವೇಗೌಡರೇ ಬಲಿಯಾದ್ರು: ರೇಣುಕಾಚಾರ್ಯ

Raghavendra Adiga
ಬೆಂಗಳೂರು: ಯಡಿಯೂರಪ್ಪ ದೈವ ಭಕ್ತರು, ನಾಡಿಗೆ ಒಳ್ಳೆಯದಾಗಲಿ ಎಂದು ಹೋಮ ಹವನ ಮಾಡಿಸಿದ್ದರ ಪರಿಣಾಮವಾಗಿ ದೇವರು, ಜನ ಮೆಚ್ಚಿ ಬಿಜೆಪಿಗೆ 25 ಸೀಟು ವರ ದಯಪಾಲಿಸಿದ್ದಾರೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ. 
ದೇವೇಗೌಡರ ಕುಟುಂಬದವರು ಜ್ಯೋತಿಷಿಗಳು, ಮಾಟ ಮಂತ್ರದ ಬೆನ್ನು ಹತ್ತಿದ್ದರು. ರೇವಣ್ಣ, ಭವಾನಿ ಮಂತ್ರ ಮಾಡಿಸಿದ್ದ ನಿಂಬೆಹಣ್ಣು ಪಾಪ ದೇವೇಗೌಡರನ್ನೇ ಬಲಿ ತೆಗೆದುಕೊಂಡಿತು ಎಂದು ಮೂದಲಿಸಿದರು.
ಕಾಂಗ್ರೆಸ್ ಶಾಸಕರನ್ನು ಅತೃಪ್ತರು ಎನ್ನುವುದು ಸರಿಯಲ್ಲ.ಅವರೆಲ್ಲಾ ಗೌರವಾನ್ವಿತ ಶಾಸಕರು. ಅವರಿಗೆ ಕೆಲವರಿಗೆ ಸಚಿವ ಸ್ಥಾನ ತಪ್ಪಿಸಲಾಗಿತ್ತು. ಕ್ಷೇತ್ರಕ್ಕೆ ಅನುದಾನ ಸಿಗದಂತೆ ಮಾಡಲಾಗಿತ್ತು. ಈ ಕಾರಣದಿಂದ ಅವರು ಸಿಡಿದು ಹೊರಗೆ ಬರುತ್ತಾರೆ, ಮೈತ್ರಿ ಸರ್ಕಾರ ತಾನಾಗಿಯೇ ಪತನವಾಗುತ್ತದೆ. ಬಿಜೆಪಿ ಸರ್ಕಾರ ರಚನೆ ಮಾಡುವ ಒಳ್ಳೆಯ ಅವಕಾಶಗಳು  ತಾನಾಗಿಯೇ ಒದಗಿ ಬರಲಿದೆ ಎಂದು ರೇಣುಕಾಚಾರ್ಯ ಹೇಳಿದರು. 
ಈಗಿರುವುದು ನಕಲಿ ಕಾಂಗ್ರೆಸ್. ಸ್ವಾತಂತ್ರ್ಯ ಪೂರ್ವದಲ್ಲೇ ಮಹಾತ್ಮಾಗಾಂಧಿ ಈ ಕಾಂಗ್ರೆಸ್ ನ್ನು ವಿಸರ್ಜನೆ ಮಾಡಿ ಎಂದಿದ್ದರು. ಈಗ ಮೋದಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿದೆ. ಧೈರ್ಯ ಇದ್ದರೆ ಕಾಂಗ್ರೆಸ್ ನ್ನು ಆ ಪಕ್ಷದ ನಾಯಕರು ವಿಸರ್ಜನೆ ಮಾಡಲಿ ಎಂದು ರೇಣುಕಾಚಾರ್ಯ ಸವಾಲು ಹಾಕಿದರು.
SCROLL FOR NEXT