ರಾಜಕೀಯ

ಉಪ ಚುನಾವಣೆ ಗಿಮಿಕ್: ಹುಣಸೂರು ಒಕ್ಕಲಿಗ ಗ್ರಾಮಗಳಿಗೆ ಭರಪೂರ ಅನುದಾನ 

Shilpa D

ಮೈಸೂರು: ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಹಾಗೂ ಯಡಿಯೂರಪ್ಪ ಅವರ ಹೊಸ ಸ್ನೇಹಿತ ಎಎಚ್ ವಿಶ್ವನಾಥ್ ಅವರು ಉಪಚುನಾವಣೆಯಲ್ಲಿ ಕಣಕ್ಕಿಳಿಯುವ ಹುಣಸೂರು ಕ್ಷೇತ್ರಕ್ಕೆ ಸಿಎಂ ಬಿಎಸ್ ವೈ ಭರಪೂರ ಅನುದಾನ ಬಿಡುಗಡೆ ಮಾಡಿದ್ದಾರೆ.

ಹುಣಸೂರಿನಲ್ಲಿ ಬಿಜೆಪಿ ಸಾಮರ್ಥ್ಯ ಬಲಹೀನವಾಗಿರುವುದರಿಂದ ಹಾಗೂ ವಿಶ್ವನಾಥ್ ಅವರನ್ನು ಗೆಲ್ಲಿಸಬೇಕೆಂದು ಪಣ ತೊಟ್ಟಿರುವ ಯಡಿಯೂರಪ್ಪ, ಒಳಚರಂಡಿ ಹಾಗೂ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದು, ಹಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಪ್ರಭಾವಿ ಒಕ್ಕಲಿಗರ ಗಮನವನ್ನು ತಮ್ಮ ಕಡೆ ಕೇಂದ್ರೀಕರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ,

ಹಾಗೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಭದ್ರಕೋಟೆಗೆ ಲಗ್ಗೆ ಇಡಲು ಬಿಜೆಪಿ ಹವಣಿಸುತ್ತಿದೆ. ಈ ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯ ಅತ್ಯಧಿಕವಾಗಿರುವ ಕಾರಣ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿಯ ಇತರ ನಾಯಕರು ಆತಂಕಗೊಂಡಿದ್ದಾರೆ, ಈ ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಿರುವ ಕಾರಣ  ಕಾಮಗಾರಿಗಳಿಗಾಗಿ ಸುಮಾರು 35 ಕೋಟಿ ರು ಹಣ ಬಿಡುಗಡೆ ಮಾಡಿದ್ದಾರೆ. ಹಿಂದಿನ ಸರ್ಕಾರ ಕೂಡ 115 ಕೋಟಿರು ಹಣ ರಿಲೀಸ್ ಮಾಡಿತ್ತು.

ಅನರ್ಹ ಶಾಸಕ ವಿಶ್ವನಾಥ್ ಮನೆ ಮನೆಗಳಿಗೆ ತೆರಳಿ ಮತಯಾಚಿಸುತ್ತಿದ್ದಾರೆ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯವಿರುವ ಪ್ರದೇಶಗಳಿಗೆ ಇದೇ ಮೊದಲ ಬಾರಿಗೆ ಅಭಿವೃದ್ಧಿ ಕಾರ್ಯಗಳಿಗಾಗಿ , ತಾವು ವಿಶೇಷ ಅನುದಾನ ತಂದಿರುವುದಾಗಿ ತಿಳಿಸಿದ್ದಾರೆ.

ಒಕ್ಕಲಿಗ ಪ್ರಾಬಲ್ಯವಿರುವ ಹನಗೋಡು ಮತ್ತು ಬಿಳಿಕೆರೆ ಹೋಬಳಿಗಳ 50 ಗ್ರಾಮಗಳ ಅಭಿವೃದ್ಧಿಗಾಗಿ 154 ಕೋಟಿ ರು ಅನುದಾನವನ್ನು ಸರ್ಕಾರ ಮೀಸಲಿಟ್ಟಿದೆ.

ಜಾತಿ ಬಿಟ್ಟು ನಾನು ಅಭಿವೃದ್ಧಿ ಕೆಲಸಗಳ ಮೂಲಕ ಜನರಿಗೆ ಮತಯಾಚಿಸುವುದಾಗಿ ತಿಳಿಸಿದ್ದಾರೆ,

SCROLL FOR NEXT