ರಾಜಕೀಯ

ಉ.ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಸವಲತ್ತು ಸಿಂಹಪಾಲು: ಬಿಜೆಪಿಯದ್ದು ಚುನಾವಣಾ ರಾಜಕೀಯ ಎನ್ನುತ್ತಿದೆ ಕಾಂಗ್ರೆಸ್ 

Sumana Upadhyaya

ಬೆಂಗಳೂರು: ಮುಂದಿನ ತಿಂಗಳು ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳ ಮೇಲೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೆಚ್ಚು ಒಲವನ್ನು ತೋರಿಸುತ್ತಿದ್ದಾರೆ. ಜನತೆಗೆ ಬೇಕಾಗಿರುವ ಕೆಲಸಗಳನ್ನು ಈ ಕ್ಷೇತ್ರಗಳಿಗೆ ಬೇಗನೆ ಮಾಡಿಸಿಕೊಡುತ್ತಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.


ನಿನ್ನೆ ಯಡಿಯೂರಪ್ಪನವರು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿ ಹಲವು ಯೋಜನೆಗಳನ್ನು ಪ್ರಕಟಿಸಿದರು. 640 ಕೋಟಿ ರೂಪಾಯಿ ವೈದ್ಯಕೀಯ ಕಾಲೇಜಿಗೆ, 700 ಕೋಟಿಗೂ ಅಧಿಕ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚುನಾವಣೆ ನಡೆಯುವುದಕ್ಕೆ ಎರಡು ದಿನ ಮೊದಲು ಪ್ರಕಟಿಸಿದರೆ ಏನೂ ಪ್ರಯೋಜನವಾಗುವುದಿಲ್ಲ. ಹೀರೇಕೆರೂರಿನಲ್ಲಿ ಯಡಿಯೂರಪ್ಪನವರು 120 ಕೋಟಿ ರೂಪಾಯಿ ಪ್ರಕಟಿಸಿದ್ದಾರೆ, ಉಪ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಇತ್ತೀಚಿನ ದಿನಗಳಲ್ಲಿ ಒಲವು ತೋರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಸಿಟ್ಟಾಗಿದ್ದಾರೆ.


ಹಾವೇರಿಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ 100 ಕೋಟಿ ರೂಪಾಯಿಗೂ ಅಧಿಕ ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ಹೊಸಕೋಟೆಗೆ ಭೇಟಿ ಕೊಟ್ಟು ಕಾವೇರಿ ನೀರು ಮತ್ತು ಮೆಟ್ರೊ ರೈಲು ಸಂಪರ್ಕದ ಭರವಸೆ ನೀಡಿದ್ದರು. ಕೆ ಆರ್ ಪೇಟೆಯಲ್ಲಿ ಸಾವಿರ ಕೋಟಿಗೂ ಅಧಿಕ ಹಣವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.


ಇದನ್ನು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ, ಒಂದೆಡೆ ಬಿಜೆಪಿ ಆಪರೇಷನ್ ಕಮಲ ಮಾಡಿಲ್ಲ ಎಂದು ಹೇಳುತ್ತಿದೆ. ಇನ್ನೊಂದೆಡೆ ಉಪ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಹೋಗಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದೆ, ಏನಿದರ ಅರ್ಥ ಎಂದು ಆರೋಪಿಸಿದರು.

SCROLL FOR NEXT