ರಾಜಕೀಯ

ಉಪಚುನಾವಣೆ: ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗೆ ಕೈ ನಾಯಕರಲ್ಲಿ ಭಿನ್ನ ಅಭಿಪ್ರಾಯ

Nagaraja AB

ಬೆಂಗಳೂರು: ಡಿಸೆಂಬರ್ 5 ರಂದು ನಡೆಯಲಿರುವ ಉಪ ಚುನಾವಣೆಗೆ ಸ್ಪರ್ಧಿಸಲಿರುವ ಕೈ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೆ ಸಂಬಂಧಿಸಿದಂತೆ  ನಾಯಕರಲ್ಲಿ  ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.  ಶಿವಾಜಿನಗರ ಸೇರಿದಂತೆ ಏಳಕ್ಕೂ ಹೆಚ್ಚು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಗಾಗಿ  ಇನ್ನೇರಡು ದಿನಗಳ ಕಾಲ ಕಾಯಬೇಕಾಗುತ್ತದೆ ಎಂದು  ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಅನರ್ಹ ಶಾಸಕರ ಅರ್ಜಿ ಕುರಿತ ವಿಚಾರಣೆ ಬುಧವಾರ ನಡೆಯಲಿದ್ದು, ನಂತರ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಆದರೆ, ಶಿವಾಜಿನಗರ ಕ್ಷೇತ್ರದಿಂದ ರಿಜ್ವಾನ್ ಅರ್ಷಾದ್ ಅವರ ಸ್ಪರ್ಧೆಗೆ ಹಲವು ಕೈ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ರಿಜ್ವಾದ್ ಅರ್ಷಾದ್ ಅವರ ಸೋತಿದ್ದರು.

ಬೆಳಗಾವಿ ಜಿಲ್ಲೆಯ  ಅಥಣಿ, ಗೋಕಾಕ್ ಮತ್ತು ಕಾಗವಾಡ ಕ್ಷೇತ್ರಗಳಲ್ಲಿ ಅಂತಹ ಹೇಳಿಕೊಳ್ಳುವಂತಹ ಹಿರಿಯ ನಾಯಕರಿಲ್ಲದ ಕಾರಣ ಸುಲಭ ಗೆಲುವು ಅಸಾಧ್ಯವಾಗಿದೆ. ಬಳ್ಳಾರಿಯಲ್ಲೂ ತೀವ್ರ ಪೈಪೋಟಿ ಕಂಡುಬರಲಿದೆ. ಯಶವಂತಪುರ ಹಾಗೂ ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆಯ ಕ್ಷೇತ್ರಕ್ಕೂ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿಲ್ಲ. ಹೈಕಮಾಂಡ್ ಮಧ್ಯಪ್ರವೇಶಕ್ಕೆ ಕಾಯಲಾಗುತ್ತಿದೆ. 

ಬಿಜೆಪಿ ಅಭ್ಯರ್ಥಿಗಳ ಪಟ್ಟಿ  ಬಿಡುಗಡೆಗೆ ಕಾಯಲಾಗುತ್ತಿದೆ. ಒಂದು ವೇಳೆ ಅಲ್ಲಿಂದ ರೋಷನ್ ಬೇಗ್ ಅವರನ್ನು ಬಿಜೆಪಿ ಕಣಕ್ಕಿಳಿಸಿದರೆ,  ಕಾಂಗ್ರೆಸ್ ನಿಂದ ಸೂಕ್ತ ಅಭ್ಯರ್ಥಿಯನ್ನು ಹಾಕಲು ಕಾಯಲಾಗುತ್ತಿದೆ ಎಂಬುದು ತಿಳಿದುಬಂದಿದೆ.

ಬಿಜೆಪಿ ಶಾಸಕ ರಾಜು ಕಾಗೆ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್,  ಪಕ್ಷದ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಬರುವುದಾದರೆ ಯಾರಾದಾರೂ ಬರಬಹುದು. ಆದರೆ, ಟಿಕೆಟ್ ನೀಡುವುದು, ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು. 

SCROLL FOR NEXT