ಬೆಳಗಾವಿ: ಗೋಕಾಕ್ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ನಾಯಕ ಅಶೋಕ್ ಪೂಜಾರಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮಾಜಿ ಸಚಿವ ಡಿಕೆ ಶಿವಕುಮಾರ್ ಒಲವು ತೋರಿದ್ದಾರೆ. ಆದರೆ ಡಿಕೆಶಿ ಆಪ್ತೆ ಲಕ್ಷ್ಮಿ ಹೆಬ್ಬಾಳ್ಕರ್ ಲಖನ್ ಜಾರಕಿ ಗೊಳಿ ಪರ ಪ್ರಚಾರ ಮಾಡಲು ಸಿದ್ಧರಾಗಿದ್ದಾರೆ.
ಬೆಂಗಳೂರಿನಲ್ಲಿ ಈಗಾಗಲೇ ಶಿವಕುಮಾರ್ ಪೂಜಾರಿ ಜೊತೆ ಸಭೆ ನಡೆಸಿದ್ದಾರೆ. ಬುಧವಾರ ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ಕೇಸ್ ನ ತೀರ್ಪು ಹೊರಬೀಳಲಿದೆ, ಆದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರೋಧ ಕಟ್ಟಿಕೊಂಡು ಪೂಜಾರಿ ಅವರನ್ನು ಕಣಕ್ಕಿಳಿಸುವುದು ಡಿಕೆ ಶಿವಕುಮಾರ್ ಅವರಿಗೆ ಸುಲಭದ ಕೆಲಸವಲ್ಲ,
ಅಭ್ಯರ್ಥಿಗಳ ಬಗ್ಗೆ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ, ಒಂದು ವೇಳೆ ಗೋಕಾಕ್ ಕ್ಷೇತ್ರದಿಂದ ಲಖನ್ ಜಾರಕಿ ಹೊಳಿ ಸ್ಪರ್ಧಿಸಿದರೇ ಪ್ರಚಾರ ನಡೆಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಿ, ತಾವು ಪ್ರಚಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಎಲ್ಲಾ 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲೇ ಬೇಕು ಎಂದು ನಾಯಕರು ಪಣ ತೊಟ್ಟಿದ್ದಾರೆ ಎಂದು ಲಕ್ಷ್ಮಿ ತಿಳಿಸಿದ್ದಾರೆ,ಪೂಜಾರಿಯಾಗಲಿ ಲಖನ್ ಆಗಲಿ ಪಕ್ಷ ಯಾರನ್ನು ಕಣಕ್ಕಿಳಿಸಿದರೂ ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಜಿಲ್ಲಾ ಸಹಕಾರ ಬ್ಯಾಂಕ್ನ ಚುನಾವಣೆ ಹಿನ್ನೆಲೆಯಲ್ಲಿ ಜಾರಕಿ ಹೊಳಿ ಸಹೋದರರ ವಿರುದ್ಧ ಸಮರ ಸಾರಿದ್ದರು. ಆ ಸಂದರ್ಭದಲ್ಲಿ ಸತೀಶ್ ಜಾರಕಿ ಹೊಳಿ ಮತ್ತು ರಮೇಶ್ ಜಾರಕಿಹೊಳಿ ಒಟ್ಟಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬೆಂಬಲ ನೀಡುತ್ತಿದ್ದ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ್ದರು.