ರಾಜಕೀಯ

ಡಿಸೆಂಬರ್ 9 ನಂತರ ಯಡಿಯೂರಪ್ಪ ಕುರ್ಚಿ ಕಳೆದುಕೊಳ್ಳಲಿದ್ದಾರೆ-ಸಿದ್ದು ಭವಿಷ್ಯ  

Nagaraja AB

ಮಂಡ್ಯ: ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಮಾಡಿದರು. ಪ್ರತಿಯೊಂದು ಗ್ರಾಮಗಳಲ್ಲಿ ಸಿದ್ದರಾಮಯ್ಯ ಅವರಿಗೆ ಮಹಿಳೆಯರು ಆರತಿ ಎತ್ತಿ ಸ್ವಾಗತ ಕೋರುತಿದದ್ದು ವಿಶೇಷವಾಗಿತ್ತು. 

ಮರಡಿಲಿಂಗೇಶ್ವರ, ಕಿಕ್ಕೇರಿ, ಮಂದಗರೆ, ಅಕ್ಕಿ ಹೆಬ್ಬಾಳು, ಸೋಮನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಕೆ. ಬಿ. ಚಂದ್ರಶೇಖರ್ ಪರವಾಗಿ ಪ್ರಚಾರ ನಡೆಸಿ, ಅವರನ್ನು ಬೆಂಬಲಿಸುವಂತೆ
ಮತದಾರರಲ್ಲಿ ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಉಪ ಚುನಾವಣೆ ನಡೆಯಲಿರುವ 12ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾದ ಕೂಡಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುರ್ಚಿ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು. 

ನಾರಾಯಣಗೌಡ ಸೇರಿದಂತೆ ಎಲ್ಲಾ 15 ಜನ ಅನರ್ಹ ಶಾಸಕರೂ ಯಾವುದೇ ಕಾರಣಕ್ಕೂ ಮತ್ತೆ ವಿಧಾನಸಭೆಗೆ ಪ್ರವೇಶಿಸಿದಂತೆ ರಾಜ್ಯದ ಪ್ರಬುದ್ಧ ಮತದಾರರ ಎಚ್ಚರ ವಹಿಸಬೇಕೆಂದು  ಸಿದ್ದರಾಮಯ್ಯ ಹೇಳಿದರು. ಹಾಲುಮತ ಕುರುಬ ಸಮುದಾಯದವರೇ ಹೆಚ್ಚಾಗಿರುವ ಗ್ರಾಮಗಳಲ್ಲಿಯೇ ಸಿದ್ದರಾಮಯ್ಯ ಪ್ರಚಾರ ಕಾರ್ಯ ನಡೆಸಿದ್ದ ವಿಶೇಷವಾಗಿತ್ತು. 

ಸಿದ್ದರಾಮಯ್ಯ ಅವರೊಂದಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೂಡಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಮೂಲಕ ಕೆ. ಆರ್. ಪೇಟೆ ತಾಲೂಕಿನಿಂದಲೇ ಹೊಸ ರಾಜಕೀಯ ಮನ್ವಂತರಕ್ಕೆ ನಾಂದಿ ಹಾಡಿ ಎಂದು ಕರೆ ನೀಡಿದರು.

ಕಾಂಗ್ರೆಸ್ ಅಭ್ಯರ್ಥಿ ಕೆ. ಬಿ. ಚಂದ್ರಶೇಖರ್ ಮಾತನಾಡಿ, ನಾರಾಯಣಗೌಡರಿಗೆ ತಾಲೂಕಿನ ಅಭಿವೃದ್ಧಿ ಹಾಗೂ ದೂರದೃಷ್ಠಿಯ ಕೊರತೆಯಿದೆ ಎಂದು ಟೀಕಿಸಿದರು. ರಾಜೀನಾಮೆ ನೀಡಿ  ಜನಾದೇಶವನ್ನು ಧಿಕ್ಕರಿಸಿರುವ ನಾರಾಯಣಗೌಡರಿಗೆ ಮತದಾರರು ತಕ್ಕ ಪಾಠ ಕಲಿಸಬೇಕಾಗಿದೆ. ತಮ್ಮಗೆ ಮತ ನೀಡಿ ಜನ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ವರದಿ- ನಾಗಯ್ಯ

SCROLL FOR NEXT