ರಾಜಕೀಯ

ಉಪಚುನಾವಣೆ: ರಾಜ್ಯ ಬಿಜೆಪಿ ಮೇಲೆ ಕೇಂದ್ರ ನಾಯಕರ ಕಣ್ಣು

Manjula VN

ಬೆಂಗಳೂರು: 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ರಾಜ್ಯ ಬಿಜೆಪಿ ಸರ್ಕಾರದ ಅಳಿವು ಹಾಗೂ ಉಳಿವನ್ನು ನಿರ್ಧರಿಸುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅವಕಾಶಗಳನ್ನು ತೆಗೆದುಕೊಳ್ಳಲು ನಿರ್ಧರಿಸಿರುವ ಕೇಂದ್ರ ನಾಯಕರು ರಾಜ್ಯ ಬಿಜೆಪಿ ನಾಯಕರ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದಾರೆ. 

ರಾಜ್ಯ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಕೇಂದ್ರದ ಬಿಜೆಪಿ ನಾಯಕರು ಬಹಳ ಹತ್ತಿರದಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಸೋಲದಿರುವುದಕ್ಕೆ ನಿರ್ಧರಿಸಿರುವ ಬಿಜೆಪಿ, ವಿವಾದಾತ್ಮಕ ಹೇಳಿಕೆಯಿಂದ ದೂರ ಇರುವಂತೆ, ಮಹಿಳಾ ಅಭ್ಯರ್ಥಿಗಳನ್ನು ಗುರಿ ಮಾಡದಂತೆ, ಜಾತಿ ವಿವಾದಗಳನ್ನು ಮಾಡದಂತೆ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. 

ಕೆಲ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಬೆಂಬಲಿಗರು ಹಾಗೂ ಕಾರ್ಯಕರ್ತರು ಘರ್ಷಣೆ ಏರ್ಪಟ್ಟಿದ್ದರೂ ಬಿಜೆಪಿ ಮಾತ್ರ 15 ವಿಧಾನಸಭಾ ಕ್ಷೇತ್ರಗಳ ಪೈಕಿ 10-12 ಕ್ಷೇತ್ರಗಳಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದೆ. 

ವಿವಾದ ಸೃಷ್ಟಿಸಿದ್ದ ಜೆಸಿ ಮಾಧುಸ್ವಾಮಿ ಪರವಾಗಿ ಸಿಎಂ ಯಡಿಯೂರಪ್ಪ ಅವರೇ ಸ್ವತಃ ಕ್ಷಮಾಪಣೆ ಕೇಳುವ ಮೂಲಕ ಇದೀಗ ವಿವಾದಕ್ಕೆ ತೆರೆ ಎಳೆದಿದ್ದಾರೆ. 

ನಿನ್ನೆಯಷ್ಟೇ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿಯವರು ರಾಜಕೀಯ ಹಾಗೂ ಅಭಿವೃದ್ಧಿ ಸ್ಥಿರತೆ ಕುರಿತು ಪ್ರಚಾರ ಕಾರ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಈ ಪಟ್ಟಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ವಿವರಿಸಲಾಗಿದೆ. 

ಜಮ್ಮು ಮತ್ತು ಕಾಶ್ಮೀರದ 370 ವಿಧಿ ರದ್ಧತಿ, ರಾಮ ಮಂದಿರ ವಿವಾದ ಸೇರಿದಂತೆ ಹಲವು ವಿಚಾರಗಳನ್ನು ಪಟ್ಟಿಯಲ್ಲಿ ವಿವರಿಸಲಾಗಿದೆ. 

33 ವರ್ಷಗಳ ಬಳಿಕ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದು ಪಕ್ಷದ ಸರ್ಕಾರವನ್ನು ನೋಡುತ್ತಿದ್ದೇವೆ ಎಂದು ಲಿಂಬಾವಳಿ ಹೇಳಿದ್ದಾರೆ. 

SCROLL FOR NEXT