ರಾಜಕೀಯ

ಶಿವಾಜಿನಗರ ಬಿಜೆಪಿ ಅಭ್ಯರ್ಥಿ ಪರ ರೋಷನ್ ಬೇಗ್, ಕಾಂಗ್ರೆಸ್ ಕಾರ್ಪುರೇಟರ್ ಬಹಿರಂಗ ಪ್ರಚಾರ

Lingaraj Badiger

ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಅನರ್ಹ ಶಾಸಕ ರೋಷನ್ ಬೇಗ್ ಹಾಗೂ ಕಾಂಗ್ರೆಸ್ ಕಾರ್ಪೊರೇಟರ್ ಗುಣಶೇಖರ್ ಅವರು ಸೋಮವಾರ ಬಹಿರಂಗವಾಗಿಯೇ ಪ್ರಚಾರ ನಡೆಸಿದರು.

ಬಿಜೆಪಿ ಪಕ್ಷ ಸೇರ್ಪಡೆಯಾಗದಿದ್ದರೂ ಮತ್ತು ಚುನಾವಣೆಗೆ ಟಿಕೆಟ್ ಸಿಗದಿದ್ದರೂ ರೋಷನ್ ಬೇಗ್​ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುವ ಮೂಲಕ ಅಚ್ಚರಿಗೆ ಮೂಡಿಸಿದರು.

ಶಿವಾಜಿನಗರ ಕ್ಷೇತ್ರದ ರೆಸೆಲ್ ಮಾರುಕಟ್ಟೆ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಶರವಣ ಪರ ಪ್ರಚಾರ ಮಾಡಿದ ಅವರು, ಉರ್ದು ಭಾಷೆಯಲ್ಲಿ ಶರವಣ ಅವರಿಗೆ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು.

ಶಿವಾಜಿನಗರ ಛೋಟಾ ಹಿಂದೂಸ್ಥಾನ. ಇಲ್ಲಿ ಹಿಂದೂ, ಮುಸ್ಲಿಂ, ಸಿಖ್ಖರು, ಜೈನರು, ಕ್ರೈಸ್ತರು ಎಲ್ಲರೂ ಇದ್ದಾರೆ. ಎಲ್ಲರೂ ಒಟ್ಟಾಗಿ ಈ ದೇಶದಲ್ಲಿ ಇರಬೇಕು. ಈ ದೇಶ ಮೋದಿ ನೇತೃತ್ವದಲ್ಲಿ ಮುನ್ನಡೆಯಬೇಕು. ಮುಸ್ಲಿಮರೂ ಹಿಂದೆ ಸರಿಯಬಾರದು. ಮುಸ್ಲಿಮರು ಬೇರೆ ಎನ್ನುವ ಸಂದೇಶ ಹೋಗಬಾರದು. ಬಿಜೆಪಿ ಜೊತೆ ನಾವೂ ಇರಬೇಕು ಎಂದರು.

ಮುಸ್ಲಿಮರೂ ದೇಶದ ಅಭಿವೃದ್ಧಿ ಬಯಸುತ್ತಾರೆ ಎನ್ನುವುದನ್ನು ನಾವು ತೋರಿಸಬೇಕು.ಮುಸ್ಲಿಮರ ಓಲೈಕೆ, ವೋಟ್ ಬ್ಯಾಂಕ್ ಕಾಲ ಮುಗಿದಿದೆ. ನಮ್ಮನ್ನು ತೋರಿಸಿ ತೋರಿಸಿ, ಮೂರ್ಖರನ್ನಾಗಿಸುವ ಕಾಲ ಹೋಗಿದೆ. ನಾವೂ ದೇಶದ ಅಭಿವೃದ್ಧಿ ಬಯಸುತ್ತೇವೆ. ದೇಶದ ಅಭಿವೃದ್ಧಿಗಾಗಿ ಭಾರತ ಸರ್ಕಾರ, ಮೋದಿ ಜೊತೆಗಿರುತ್ತೇವೆ ಎಂದು ಪ್ರಚಾರದ ವೇಳೆ ರೋಷನ್ ಬೇಗ್ ಹೇಳಿದರು.

SCROLL FOR NEXT