ಬೆಂಗಳೂರು: ಮಹಾರಾಷ್ಟ್ರದಲ್ಲಿ ರೋಚಕ ರಾಜಕೀಯ ತಿರುವುಗಳ ಮಧ್ಯೆ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು 'ಮಾಡಿದ್ದುಣ್ಣೊ ಮಹರಾಯ' ಎಂಬ ಲೋಕರೂಢಿಯಂತೆ ತಾವು ಮಾಡಿದ್ದರ ಪ್ರತಿಫಲವನ್ನು ಫಡ್ನವೀಸ್ ಉಣ್ಣುತ್ತಿದ್ದಾರೆ. ಇದೇ ರೀತಿಯಲ್ಲಿ ಯಡಿಯೂರಪ್ಪ ಕೂಡ ಉಣ್ಣುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಕಾಲಚಕ್ರಕ್ಕೆ ಯಡಿಯೂರಪ್ಪ ಸಹ ಸಿಲುಕಿ ನಲುಗಿದ್ದಾರೆ. ಅಧಿಕಾರದಾಹಿ ಬಿಜೆಪಿ ತನ್ನ ಕೃತ್ಯಗಳಿಗೆ ತಾನೇ ಬೆಲೆ ತೆರುತ್ತಿದೆ. ಅಧಿಕಾರದ ಹಪಹಪಿ, ಸರ್ಕಾರಗಳನ್ನು ಕೆಡವುದು, ಅನಿವಾರ್ಯವಾಗಿ ಚುನಾವಣೆ ತರುವುದನ್ನು ಬಿಜೆಪಿ ಇನ್ನಾದರೂ ಬಿಡಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ತಿಳಿದು ಬೇಸರವಾಯಿತು. ಹಾಗೆ ನೋಡಿದರೆ ಅವರ ಪದತ್ಯಾಗ ತಮಗೆ ಖುಷಿ ಕೊಡಬೇಕಿತ್ತು. ಏಕೆಂದರೆ ಮೈತ್ರಿ ಸರ್ಕಾರ ಕೆಡವಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದು ಅವರೇ ಅಲ್ಲವೇ?. ಮುಂಬೈನಲ್ಲಿ ಅನರ್ಹರಿಗೆ ಆತಿಥ್ಯ ಕೊಟ್ಟವರು ಫಡ್ನವೀಸ್. ಈಗ ಅವರಿಗೆ ಕಾಲ ಈ ರೀತಿ ಉತ್ತರ ಕೊಟ್ಟಿದ್ದನ್ನು ನೋಡಿ ಬೇಸರವಾಗುತ್ತಿದೆ ಎಂದು ಕುಮಾರಸ್ವಾಮಿ ಬಿಜೆಪಿ ಕಾಲೆಳೆದಿದ್ದಾರೆ