ಬೆಂಗಳೂರು: ಮೈಸೂರು ಜಿಲ್ಲೆ ವಿಭಜಿಸಿ ಹುಣಸೂರನ್ನು ಪ್ರತ್ಯೇಕ ಜಿಲ್ಲೆಯಾಗಿ ವಿಂಗಡಿಸಬೇಕು ಎಂಬ ಅನರ್ಹ ಶಾಸಕ ಹೆಚ್ ವಿಶ್ವನಾಥ್ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಟುವಾಗಿ ವಿರೋಧಿಸಿದ್ದಾರೆ.
ಉಪಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಜಿಲ್ಲೆ ವಿಚಾರ ಪ್ರಸ್ತಾಪಿಸಿದ್ದಾರೆ. ಚುನಾವಣೆಗಾಗಿ ಜಿಲ್ಲೆ ಮಾಡುವುದು ಆಗಬಾರದು. ಇಂತಹ ವಿಚಾರಗಳಲ್ಲಿ ಸ್ವಾರ್ಥ ರಾಜಕಾರಣ ಇರಬಾರದು ಎಂದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್ ಇಂದು ನಿನ್ನೆಯಿಂದ ರಾಜಕಾರಣದಲ್ಲಿ ಇಲ್ಲ. ಬಹಳ ಬರ್ಷಗಳಿಂದ ಸಾರ್ವಜನಿಕ ಜೀವದಲ್ಲಿದ್ದಾರೆ. ಇಷ್ಟು ವರ್ಷಗಳಲ್ಲಿ ಹುಣಸೂರು ಜಿಲ್ಲೆಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ಬಗ್ಗೆ ಮಾತನಾಡದ ಅವರು, ಈಗ ಉಪಚುನಾವಣೆ ಬರುತ್ತಿದೆ ಎಂದು ಹೀಗೆಲ್ಲಾ ಗಿಮಿಕ್ ಮಾಡುವುದು ಸರಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು
ಈ ಮಧ್ಯೆ ಟಿ. ನರಸೀಪುರದಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮೈಸೂರಿನಿಂದ ಹುಣಸೂರು ಕೇವಲ 40 ಕಿಲೋ ಮೀಟರ್ ದೂರದಲ್ಲಿದ್ದು, ಹುಣಸೂರು ಪ್ರತ್ಯೇಕ ಜಿಲ್ಲೆ ವೈಜ್ಞಾನಿಕವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹುಣಸೂರು ಜಿಲ್ಲೆ ಮಾಡುವಂತೆ ಮಾಜಿ ಸಚಿವ, ಅನರ್ಹ ಶಾಸಕ ಎಚ್. ವಿಶ್ವನಾಥ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು. ಈಗ ಮೈಸೂರು ಜಿಲ್ಲೆ ವಿಭಜನೆ ಮಾಡುವ ಅಗತ್ಯವಿಲ್ಲ. ಇದು ವೈಜ್ಞಾನಿಕವಾಗಿಯೂ ಇಲ್ಲ ಎಂದರು.