ರಾಜಕೀಯ

ಪ್ರವಾಹ ಪರಿಹಾರ: ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ಮುಂದುವರೆದ ಕೆಸರೆರಚಾಟ

Manjula VN

ಬೆಂಗಳೂರು: ನೆರೆ ಪೀಡಿತರ ಕುರಿತಂತೆ ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಇತ್ತ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಪ್ರವಾಹ ಪರಿಹಾರ ಕುರಿತಂತೆ ಕೆಸರೆರಚಾಟ ಎಂದಿನಂತೆ ಮುಂದುವರೆದಿವೆ. 

ಪ್ರವಾಹದಿಂದಾಗಿರುವ ನಷ್ಟ ಕುರಿತಂತೆ ಕಾಂಗ್ರೆಸ್ ಸಮೀಕ್ಷೆ ನಡೆಸಿದ್ದು, ಬಿಜೆಪಿ ಸರ್ಕಾರ ನಡೆಸಿರುವ ಸಮೀಕ್ಷಾ ವರದಿ ವಾಸ್ತವಿಕವಾಗಿಲ್ಲ ಎಂದು ಹೇಳಿದೆ. ಈ ಹೇಳಿಕೆಗೆ ತೀವ್ರವಾಗಿ ಕಿಡಿಕಾರಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್ಸಿ ಎನ್. ರವಿಕುಮಾರ್ ಅವರು, ಕಾಂಗ್ರೆಸ್ ಸಮೀಕ್ಷೆಯೇ ವಾಸ್ತವಿಕವಾಗಿಲ್ಲ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ನಾಯಕರು ಪ್ರವಾಹದಲ್ಲಿ 35 ಸಾವಿರ ಕಿಮೀ ರಸ್ತೆಗಳು ನಾಶಗೊಂಡಿವೆ ಎಂದು ಹೇಳುತ್ತಿದ್ದಾರೆ. ಆದರೆ, 5,000 ಕಿಮೀ ರಸ್ತೆಗಳಷ್ಟೇ ನಾಶವಾಗಿವೆ. 30 ಲಕ್ಷ ಎಕರೆ ಬೆಳೆ ನಾಶವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, 24 ಲಕ್ಷ ಎಕರೆ ಭೂಮಿ ನಾಶಗೊಂಡಿದೆ. 3 ಲಕ್ಷ ಮನೆಗಳು ನಾಶಗೊಂಡಿವೆ ಎಂದು ಹೇಳುತ್ತಿದ್ದಾರೆ. 3,000 ಗ್ರಾಮಗಳು ಭಾಗಶಃ ನಾಶಗೊಂಡಿವೆ. 1,000 ಮನೆಗಳನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ. ಕಾಂಗ್ರೆಸ್ ಸಮೀಕ್ಷಾ ವರದಿ ವಾಸ್ತವಿಕವಲ್ಲ ಹಾಗೂ ಆಧಾರ ರಹಿತವಾದದ್ದು ಎಂದು ಹೇಳಿದ್ದಾರೆ. 

ಈ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಪ್ರತಿಕ್ರಿಯೆ ನೀಡಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಜನರೊಂದಿಗೆ ಮಾತುಕತೆ ನಡೆಸಿದ ಬಳಿಕವೇ ವರದಿಯನ್ನು ಸಿದ್ಧಪಡಿಸಲಾಗಿದೆ. ಬಿಜೆಪಿ ನಾಯಕರ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ. 

SCROLL FOR NEXT