ರಾಜಕೀಯ

ಜೆಡಿಎಸ್ ತ್ಯಜಿಸುವ ಪ್ರಶ್ನೆಯೇ ಇಲ್ಲ: ಕುಪೇಂದ್ರ ರೆಡ್ಡಿ

Shilpa D

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ  ಒಡನಾಟದಲ್ಲಿ ಬೆಳೆದ ತಮಗೆ ಜೆಡಿಎಸ್ ತ್ಯಜಿಸಿ ಇನ್ನೊಂದು ಪಕ್ಷದಲ್ಲಿ ಅಧಿಕಾರ ಹಿಡಿಯಬೇಕೆಂಬ ದುರಾಸೆಯಿಲ್ಲ ಎಂದು ರಾಜ್ಯಸಭಾ ಜೆಡಿಎಸ್ ಸದಸ್ಯ ಕುಪೇಂದ್ರ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಜೆ.ಪಿ.ಭವನದಲ್ಲಿ ಬಿಜೆಪಿ‌ ಸೇರ್ಪಡೆ ಕುರಿತು ಸುದ್ದಿಗಾರರೊಂದಿಗೆ ಸ್ಪಷ್ಟನೆ ನೀಡಿದ ಅವರು, ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ತಮ್ಮನ್ನು ದೇವೇಗೌಡರು ಜೆಡಿಎಸ್ ಗೆ ಕರೆತಂದರು. ಕಾಂಗ್ರೆಸ್ ಜೊತೆ ಕೆಲಸ ಮಾಡಿದ್ದರೂ ಸಹ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಹೋಗುವುದಾಗಲಿ, ಬಿಜೆಪಿ ಸೇರುವುದಾಗಲಿ ಮಾಡುವವನಲ್ಲ. 

ಅಧಿವೇಶನ ಸಂದರ್ಭದಲ್ಲಿ ಸಂಸತ್ತಿಗೆ ಹಾಗೂ ದೆಹಲಿಯ ನಿವಾಸಕ್ಕೆ ಹೋಗುತ್ತೇನೆಯೇ ಹೊರತು ಯಾವುದೇ ಮಾಧ್ಯಮಗಳ ಮುಂದೆ ಹೇಳಿಕೆ ಕೊಡಲು ಹೋಗುವವನಲ್ಲ. ನಾನು ಮತ್ತು ಕೆ.ಸಿ ರಾಮಮೂರ್ತಿ ರಾಜ್ಯಸಭೆಯಲ್ಲಿ ಅಕ್ಕಪಕ್ಕದ ಆಸನದಲ್ಲಿಯೇ ಕುಳಿತುಕೊಳ್ಳುತ್ತೇವೆ. ನಮ್ಮ ಬಳಿ ಬಿಜೆಪಿ ಸದಸ್ಯರು ಬಂದು‌ ಮಾತನಾಡಲು‌ ಅವಕಾಶ ಇಲ್ಲ.ನನ್ನ ಜೀವನದಲ್ಲಿ ಯಾವುದಕ್ಕೂ ಭಯಪಟ್ಟವನಲ್ಲ. 

ಐಟಿ, ಇಡಿ ಬಗ್ಗೆ ನನಗೆ ಭಯವಿಲ್ಲ. ನನ್ನ ಮೇಲೆ‌ ಹಿಂದೆ ಎರಡು ದೊಡ್ಡ ದಾಳಿ ನಡೆದಿದ್ದವು. ಎಲ್ಲವನ್ನೂ  ಎದುರಿಸಿದ್ದೇನೆ. ಚೆಕ್ ತಲುಪುವ ಮುನ್ನವೇ ತೆರಿಗೆ ಕಟ್ಟಿರುತ್ತೇನೆ. ನಾನು ಎಂದಿಗೂ ತೆರಿಗೆ ವಂಚಿಸಿಲ್ಲ, ಮುಂದೆಯೂ  ತೆರಿಗೆ ವಂಚಿಸುವುದಿಲ್ಲ. ಹೀಗಾಗಿ‌ ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.ಅಧಿಕಾರದ ಆಮಿಷಕ್ಕೆ ನಾನು ಒಳಗಾಗುವುದಿಲ್ಲ  ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
 

SCROLL FOR NEXT