ರಾಜಕೀಯ

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸರ್ಕಾರ ರಚಿಸಲಿದೆ: ಮಲ್ಲಿಕಾರ್ಜುನ ಖರ್ಗೆ 

Sumana Upadhyaya

ಕಲಬುರಗಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ತನ್ನ ಮೈತ್ರಿಕೂಟಗಳೊಂದಿಗೆ ಸೇರಿ ಸರ್ಕಾರ ರಚಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾರಾಷ್ಟ್ರ ರಾಜ್ಯ ಉಸ್ತುವಾರಿ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಕಾಂಗ್ರೆಸ್-ಎನ್ ಸಿಪಿ-ಸಿಪಿಎಂ ಮೈತ್ರಿೂಕಟ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದು ಆಶ್ಚರ್ಯಕರ ರೀತಿಯಲ್ಲಿ ಫಲಿತಾಂಶವನ್ನು ನೀಡಲಿದೆ ಎಂದರು. ಮಹಾರಾಷ್ಟ್ರ ವಿಧಾನಸಭೆಗೆ ನಾಳೆ ಮತದಾನ ನಡೆಯುತ್ತಿದೆ.


ಮತದಾನ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಹೇಳಲಾಗಿದ್ದು ಕಾಂಗ್ರೆಸ್ ಗೆ ಒಂದು ಹಂತದ ಗೆಲುವು ಸಿಗಬಹುದು ಎಂದು ಸಹ ಹೇಳಿಲ್ಲ. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ರಾಜಕಾರಣದಲ್ಲಿ ಗೆಲುವು ಕಾಣುತ್ತಾ ಬಂದಿದೆ. 


ನಿನ್ನೆ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಮಹಾರಾಷ್ಟ್ರದ ಹಲವು ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದೇನೆ. ಅಲ್ಲಿ ಅಧಿಕಾರರೂಢ ಬಿಜೆಪಿ ವಿರುದ್ಧ ಜನರ ಮನೋಭಾವನೆಯಿದ್ದು ಬಿಜೆಪಿ ಸರ್ಕಾರದ ಜನವಿರೋಧಿ ಮತ್ತು ಸರ್ಕಾರ ವಿರೋಧಿ ನೀತಿಗಳಿಂದ ಈ ಬಾರಿ ಜನರು ಅದರ ಕೈಹಿಡಿಯುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಪ್ಪು ನೀತಿಗಳಿಂದ 2,200ಕ್ಕೂ ಅಧಿಕ ಕೈಗಾರಿಕೆಗಳು ಮುಚ್ಚಿವೆ ಎಂದು ಆರೋಪಿಸಿದರು.


ಮಹಾರಾಷ್ಟ್ರಕ್ಕೆ ನೀರು ಬಿಡುಗಡೆ ಮಾಡುವುದಾಗಿ ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ತಮಗೆ ಅರಿವಿಲ್ಲ ಎಂದರು. ವೀರ ಸಾವರ್ಕರ್ ಗೆ ಭಾರತ ರತ್ನ ನೀಡುವುದಾಗಿ ಹೇಳಿರುವ ಮತ್ತು ಹಿಂದುತ್ವ ತತ್ವಗಳ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಸಹ ಖರ್ಗೆ ಪ್ರತಿಕ್ರಿಯಿಸಲಿಲ್ಲ.

SCROLL FOR NEXT