ರಾಜಕೀಯ

ತಮ್ಮ ಹೇಳಿಕೆಗಳಿಗೆ ಸಿದ್ದರಾಮಯ್ಯ ಫಲ ಅನುಭವಿಸುತ್ತಾರೆ: ಜಗದೀಶ್ ಶೆಟ್ಟರ್

Lingaraj Badiger

ಹುಬ್ಬಳ್ಳಿ: ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ವಿರುದ್ಧ ಕೀಳಾಗಿ ಮಾತನಾಡಿರುವ ಸಿದ್ದರಾಮಯ್ಯ ಮುಂದೆ ಅದರ ಫಲ ಅನುಭವಿಸುತ್ತಾರೆ ಎಂದು ಸಚಿವ ಜಗದೀಶ ಶೆಟ್ಟರ್ ಅವರು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಜನಪ್ರಿಯರಾಗಲು ಹುತಾತ್ಮ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವ ಬದಲು ತಮ್ಮ ನಾಯಕತ್ವದ ಕುರಿತು ಕಾಂಗ್ರೆಸ್‌ನೊಳಗಿನ ಅಸಮಾಧಾನವನ್ನು ಮೊದಲು ಸರಿಪಡಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಹಿರಿಯ ನಾಯಕರ ವಿರುದ್ಧ ಏಕವಚನದಲ್ಲಿ ಮಾತನಾಡುವ ಮೂಲಕ ಸಿದ್ದರಾಮಯ್ಯ ಅವರು ವ್ಯಕ್ತಿತ್ವವನ್ನು ತಾವೇ ಜಗಜ್ಜಾಹೀರು ಮಾಡಿಕೊಂಡಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ವಿರುದ್ಧವೂ ಅವರು ಏಕವಚನದಲ್ಲಿ ಮಾತನಾಡುತ್ತಾರೆ. ‌ನಾವು ಕೂಡ ಅವರಂತೆ ಮಾತನಾಡಬಲ್ಲೆವು. ಆದರೆ, ಅದರಿಂದ ನಮ್ಮ ಗೌರವವೇ ಕುಂದುತ್ತದೆ ಎಂದರು.

ಸಿದ್ದರಾಮಯ್ಯ ಮೇಲೂ ಐ.ಟಿ ದಾಳಿ ನಡೆಸಲು ಬಿಜೆಪಿ ಸಂಚು ರೂಪಿಸಿದೆ ಎಂಬ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಐ.ಟಿ ಇಲಾಖೆ ಅವರಿಗೇನಾದರೂ ಕರೆ ಮಾಡಿ ತಿಳಿಸಿದೆಯೇ? ಹಾಗಿದ್ದರೆ, ದಿನೇಶ್ ಅವರೇ ದಾಳಿಗೆ ಸಂಚು ರೂಪಿಸಿರಬಹುದು. ಅದಕ್ಕಾಗಿ ಬಿಜೆಪಿ ವಿರುದ್ಧ ಮನಸ್ಸಿಗೆ ಬಂದಂತೆ ಆರೋಪ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

SCROLL FOR NEXT