ಬಾಗಲಕೋಟೆ: ಅನಿವಾರ್ಯವಾಗಿ ಎಐಸಿಸಿ ಅಧ್ಯಕ್ಷರು ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.ಹೈಕಮಾಂಡ್ಗೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ ಎಂದು ಸಚಿವ ಸಿ ಟಿ ರವಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕನ ಹುದ್ದೆಗೆ ಸರ್ವಾನು ಮತದಿಂದ ಆಯ್ಕೆ ಯಾಗಿಲ್ಲ.ಈ ಹುದ್ದೆಗೆ ಕಾಂಗ್ರೆಸ್ ಘಟಾನುಘಟಿ ನಾಯಕರು ಸ್ಪರ್ಧೆಯಲ್ಲಿದ್ದರು. ಸ್ವಾರ್ಥಿ, ವಲಸಿಗರು,ಮೂಲ ಕಾಂಗ್ರೆಸ್ ಅವರನ್ನು ಸಿದ್ದರಾಮಯ್ಯ ಸೋಲಿಸಿ ದರು ಇದನ್ನು ನಾನು ಹೇಳುತ್ತಿಲ್ಲ ಕಾಂಗ್ರೆಸ್ ಪಕ್ಷದ ನಾಯಕರೆ ಹೇಳಿರೋದು ಎಂದು ಅವರು ತಿಳಿಸಿದರು.
'ಸಿಎಂ ಯಡಿಯೂರಪ್ಪನವರನ್ನು ಬಹುಮತದಿಂದ ಆಯ್ಕೆಮಾಡಿಲ್ಲ, ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ. 70 ವರ್ಷದ ನಂತರ ಕೇಂದ್ರ ಬಿಜೆಪಿ ಮಾರ್ಗದರ್ಶನ ಮಂಡಳಿಗೆ ಹೋಗುವ ನಿಯಮವಿದೆ. ಹೀಗಾಗಿ ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರು ಅಧಿಕಾರದ ರಾಜಕೀಯದಿಂದ ನೇಪಥ್ಯಕ್ಕೆ ಸರಿದಿದ್ದಾರೆ. ಯಡಿಯೂರಪ್ಪನವರಿಗೆ ಆ ನಿಯಮ ಬ್ರೇಕ್ ಮಾಡಿ ಸಿಎಂ ಪಟ್ಟ ಕೊಡಲಾಗಿದೆ. ಬಿಎಸ್ ವೈ ಅವರನ್ನು ಹತ್ತಿಕ್ಕುತ್ತಿದ್ದಾರೆ ಎನ್ನುವವರು ಮೂರ್ಖರು ಎಂದು ಕಾಂಗ್ರೆಸ್ ವಿರುದ್ದ ಸಚಿವ ಸಿಟಿ ರವಿ ವಾಗ್ದಾಳಿ ನಡೆಸಿದರು.
ಸಾವರ್ಕರ್ ಪುಸ್ತಕವನ್ನು ಸಿದ್ದರಾಮಯ್ಯ ಓದಲಿ
ವೀರ ಸಾವರ್ಕರ್ ಬಗ್ಗೆ ಪುಸ್ತಕವನ್ನು ಸಿದ್ದರಾಮಯ್ಯ ಅವರಿಗೆ ಕಳಿಸುವ ವಿಚಾರವಾಗಿ ಮಾತನಾಡಿದ ಅವರು, ಬೆಂಗಳೂರಿಗೆ ಹೋದ ತಕ್ಷಣ ಸಿದ್ದರಾಮಯ್ಯ ಅವರಿಗೆ ಸಾವರ್ಕರ್ ಬಗೆಗಿನ ಪುಸ್ತಕ ಕಳುಹಿಸಿ ಕೊಡುತ್ತೇನೆ. ಅವರಿಗೆ ಓದುವ ಅಭ್ಯಾಸ ಬಹಳವಿದೆ. ಸಾವರ್ಕರ್ ಬಗ್ಗೆ ಪುಸ್ತಕವನ್ನ ಓದಿ ತಿಳಿದುಕೊಳ್ಳಲಿ.
ಇದೇ ವೇಳೆ ಎಸ್ ಆರ್ ಪಾಟೀಲ್ ಬಗ್ಗೆಯೂ ಕಿಡಿಕಾರಿದ ಸಿಟಿರವಿ, ಎಸ್ ಆರ್ ಪಾಟೀಲ್ ಅವರಿಗೆ ನಾಚಿಕೆಯಾಗಬೇಕು. ಅವರು ಯಾವ ಇತಿಹಾಸ ಓದಿಕೊಂಡಿದ್ದಾರೋ ಗೊತ್ತಿಲ್ಲ. ಬಹುಶಃ ಸ್ವಾತಂತ್ರ್ಯ ನಂತರ ಪಾಕಿಸ್ತಾನ ಇತಿಹಾಸ ಓದಿಕೊಂಡಿದ್ದರೆ ಹೀಗೆ ಆಗುತ್ತೆ. ಸುಭಾಷ್ ಚಂದ್ರ ಬೋಸ್, ಆಜಾದ್ ಹಿಂದ್ ಪೌಜ್ ಸೇನೆ ನಿರ್ಮಾಣ ಮಾಡಿ, ಭೂಗತರಾಗಿ ಹೋರಾಟ ಮಾಡೋವಾಗ ನಾನೇ ಮೊದಲು ಅವರನ್ನು ಹಿಡಿದು ಕೊಡುತ್ತೇನೆ ಎಂದಿದ್ದರು ಗಾಂಧೀಜಿ. ಹಾಗಂತ ಗಾಂಧೀಜಿ ಅವರನ್ನು ದೇಶದ್ರೋಹಿ ಎಂದು ಕರೆಯೋಕೆ ಆಗುತ್ತಾ.!? ಆಗೋಲ್ಲ. ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಎಷ್ಟು ಹೋರಾಡಿದ್ರೋ ಅಷ್ಟೇ ಸಾವರ್ಕರ್ ಸೇರಿದಂತೆ ಕ್ರಾಂತಿಕಾರಿಗಳ ಹೋರಾಟವಿದೆ. ಇದನ್ನು ತಿಳಿದುಕೊಂಡಾಗ ಇತಿಹಾಸದ ಸತ್ಯ ಏನು ಅಂತ ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದರು.