ರಾಜಕೀಯ

ಅಳಿಯನಿಂದಾಗಿ ರಮೇಶ್ ಜಾರಕಿಹೊಳಿ ಅಧಿಕಾರ ಕಳೆದುಕೊಳ್ಳುತ್ತಾರೆ: ಸತೀಶ್ ಜಾರಕಿಹೊಳಿ

Lingaraj Badiger

ಬೆಳಗಾವಿ: ಅಳಿಯನಿಂದಾಗಿ ರಮೇಶ್ ಜಾರಕಿಹೊಳಿ ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಶುಕ್ರವಾರ ಸ್ಪೋಟಕ ಹೇಳಿಕೆ ನೀಡಿದ್ದಾರೆ.
  
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕನಲ್ಲಿ ಪಂಚಾಯತಿ, ನಗರ ಸಭೆಯಲ್ಲಿ ಮಿತಿ ಮೀರಿ ಭ್ರಷ್ಟಾಚಾರ ನಡೆದಿದೆ. ಆ ಎಲ್ಲಾ ಭ್ರಷ್ಟಾಚಾರದ ದಾಖಲೆಗಳನ್ನು ನಾನು ಮಾಧ್ಯಮಗಳಿಗೆ ಸದ್ಯದಲ್ಲಿಯೇ ಬಿಡುಗಡೆ ಮಾಡುತ್ತೇನೆ. ಜನರಿಂದ ಹಪ್ತಾ ಹಣ ವಸೂಲಿ ಮಾಡಲಾಗುತ್ತಿದೆ. ಇದನ್ನು ನೇರವಾಗಿ ಗೋಕಾಕನಲ್ಲಿ ಪಂಚಾಯಿತಿ ಸದಸ್ಯರು ಹೇಳುತ್ತಾರೆ. ನಾವು ಅರ್ಧ ಅಳಿಯ ಅಂಬಿರಾವ್ ಅವರಿಗೆ ಹಣ ಕೊಟ್ಟು ಬರುತ್ತೇವೆ ಎಂದು ಹೇಳ್ಳುತ್ತಾರೆ. ಸದಸ್ಯರು, ಅಧಿಕಾರಿಗಳು ನಾವು ಸಂಗ್ರಹ  ಮಾಡಿ ಕೊಡುತ್ತೇವೆ ಇದರಲ್ಲಿ ನಮ್ಮ ಪಾತ್ರವಿಲ್ಲ ಎಂದು ಹೇಳುತ್ತಾರೆ ಎಂದು ಆರೋಪಿಸಿದರು.
  
ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ್ 500 ಕೋಟಿ ಆಸ್ತಿ ಒಡೆಯ. ಆದರೂ ಮಾವ ರಮೇಶ್ ಜಾರಕಿಹೊಳಿಯನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ಅಳಿಯಂದರ ಮೇಲೆ ಪ್ರೀತಿ ತೋರಿಸಿದವರು ಈಗ ಅಧಿಕಾರ ಕಳೆದುಕೊಂಡಿದ್ದಾರೆ. ಇತಿಹಾಸದಲ್ಲಿ ರಾಜರು ಅಧಿಕಾರ ಕಳೆದುಕೊಂಡಿದ್ದಾರೆ. ಇಲ್ಲಿಯು ರಮೇಶ್ ಜಾರಕಿಹೊಳಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಅವರು ಭವಿಷ್ಯ ನುಡಿದರು.
  
ಅದುವಲ್ಲದೇ ನಾವು ಜನರ ಮೇಲೆ ಪ್ರೀತಿ ತೋರಿಸಬೇಕು. ಕುಟುಂಬದ ಸದಸ್ಯರ ಮೇಲೆ ಅಲ್ಲ, ನಾನು ಗೋಕಾಕನಲ್ಲಿ ಯಾವಾಗಲೂ ಜನಪರ ಕೆಲಸ ಮಾಡುತ್ತಿದ್ದೇನೆ. ಅವು ರಾಜಕೀಯವಾಗಿ ಅಲ್ಲ, ಬಿಜೆಪಿಯವರು ಮೋದಿ ಅಲೆ ಭ್ರಮೆಯಲ್ಲಿ ಇದ್ದರು. ಸದ್ಯ ಮಹಾರಾಷ್ಟ್ರ, ಹರಿಯಾಣಾದಲ್ಲಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಮೋದಿ ಅಲೆ ಮತ್ತು ರಾಷ್ಟ್ರೀಯ ವಿಚಾರದ ಮೇಲೆ ಗೆಲ್ಲುತ್ತೇವೆ ಎಂದು ಕೊಂಡಿದ್ದರು. ಆದರೆ ಎರಡು ರಾಜ್ಯದಲ್ಲಿ ಜನರು ಸ್ಥಳೀಯ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಿದ್ದಾರೆ. ಈ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಗಂಟೆ ಆಗಿದೆ ಎಂದರು.
  
ಕೊಲ್ಲಾಪುರ, ಸಾಂಗ್ಲಿಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿದೆ. ಮೋದಿ ಆರ್ಥಿಕ ನೀತಿ ಬಿಜೆಪಿಗೆ ವ್ಯಾಪಕವಾಗಿ ಪಾಠ ಕಲಿಸಿದೆ, ನಾಲ್ಕೈದು ಕಂಪನಿಗಳನ್ನು ಬೆಳೆಸಲು ಹೊರಟಿದ್ದಾರೆ ಎಂದು ಹೇಳುವ ಮೂಲಕ ಅದಾನಿ, ಅಂಬಾನಿ ಕಂಪನಿಗಳನ್ನು ಹೆಸರಿಸದೆ ಉಲ್ಲೇಖಿಸಿದರು. ಪ್ರಧಾನಿ ಅವರ ನೀತಿಯಿಂದಾಗಿ ದೇಶದ ಆರ್ಥಿಕತೆಗೆ ಹೊಡೆತ ಬೀಳುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

SCROLL FOR NEXT