ರಾಜಕೀಯ

ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗುವೆ-  ಉಮೇಶ್ ಕತ್ತಿ

Nagaraja AB

ಹುಬ್ಬಳ್ಳಿ:  ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗುವುದಾಗಿ ಶಾಸಕ ಉಮೇಶ್​ ಕತ್ತಿ ಮತ್ತೊಮ್ಮೆ ತಮ್ಮ ಮಹತ್ವಾಕಾಂಕ್ಷೆಯನ್ನು ನಾಡಿನ ಮುಂದೆ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನು ಉಪಮುಖ್ಯಮಂತ್ರಿ ಆಗುವುದಿಲ್ಲ. ಬದಲಿಗೆ ಕರ್ನಾಟಕದ ಮುಖ್ಯಮಂತ್ರಿಯೇ ಆಗುತ್ತೇನೆ ಎಂದು ಹೇಳಿದ್ದೆ. ಇದೀಗ ಮತ್ತೆ ಪುನರುಚ್ಚರಿಸುತ್ತಿದ್ದೇನೆ. ನಾನು ರಾಜ್ಯದ ಮುಖ್ಯಮಂತ್ರಿ ಆಗಿಯೇ ತೀರುತ್ತೇನೆ  ಆದರೆ ಮುಖ್ಯಮಂತ್ರಿ ಆಗುವುದು  ಈಗಲ್ಲ. ಯಡಿಯೂರಪ್ಪ ಅವರ ನಂತರ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುತ್ತೇನೆ ಎಂದರು.

ನಾನು ಎಂಟು ಸಲ ಶಾಸಕನಾಗಿದ್ದು, ಮಂತ್ರಿಯೂ ಆಗಿ ಕೆಲಸ ಮಾಡಿದ ಹೆಚ್ಚು ಅನುಭವ ಹೊಂದಿದ್ದೇನೆ. ಮುಂದಿನ ದಿನಗಳಲ್ಲಿ ಬದಲಾವಣೆ ಆಗುತ್ತದೆ. ನಾನು ಏಕಾಂಗಿ ಅಲ್ಲ. ನನ್ನ ಜತೆ ಬಹಳ ಜನರಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು  ನನ್ನ ಗುರು ಅವರ ಮಾರ್ಗದರ್ಶನದಲ್ಲಿ ನಾನು ಮುಖ್ಯಮಂತ್ರಿ ಪದವಿಗೇರುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನನ್ನ ಮಿತ್ರ. ಸವದಿ ಅವರು ಅನರ್ಹ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ನಾನು ಅವರ ಬಗ್ಗೆ ಮಾತನಾಡಿದ್ದೇನೆ. ನಾವು ಅಧಿಕಾರಕ್ಕೆ ಬಂದಿರುವುದು ಅನರ್ಹ ಶಾಸಕರಿಂದ. ಇದನ್ನು ಯಾರೂ ಮರೆಯಬಾರದು ಎಂದರು.
ನನಗೆ ಉಪಮುಖ್ಯಮಂತ್ರಿ ಆಗುವ ಆಶಯವಿಲ್ಲ. ಉಪಮುಖ್ಯಮಂತ್ರಿ  ಹುದ್ದೆ ಅಸಾಂವಿಧಾನಿಕವಾದುದು. ಹೀಗಾಗಿ ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ತಮಗೆ ವಿಶೇಷ ಆಸಕ್ತಿಯೇನು ಇಲ್ಲ ಎಂದು ಅವರು ತಿಳಿಸಿದರು.

SCROLL FOR NEXT