ರಾಜಕೀಯ

ನನ್ನ ಪ್ರಾಣ ಹೋಗಲಿ ಆದರೆ ಮೆಡಿಕಲ್ ಕಾಲೇಜು ಬಿಟ್ಟುಕೊಡುವುದಿಲ್ಲ : ಡಿ.ಕೆ. ಶಿವಕುಮಾರ್

Srinivas Rao BV

ಬೆಂಗಳೂರು: ಕನಕಪುರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪಿಸುವ ಬಗ್ಗೆ ಹೋರಾಟ ಮಾಡಲು ನಾನು ಸಿದ್ಧನಿದ್ದು,ವಿಧಾನಸೌಧದಲ್ಲಿ ನನ್ನ ಪ್ರಾಣ ಬೇಕಿದ್ದರೆ ಹೋಗಲಿ.ಆದರೆ ಮೆಡಿಕಲ್ ಕಾಲೇಜನ್ನು ಮಾತ್ರ ಬಿಟ್ಟು ಕೊಡುವುದಿಲ್ಲ, ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸದಾಶಿವ ನಗರದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕಪುರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪನೆ ಆಗಬೇಕು. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಆದರೆ ಯಡಿಯೂರಪ್ಪ ಅದನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಲು ಚಿಂತನೆ ನಡೆಸಿದ್ದಾರೆ. ಯಡಿಯೂರಪ್ಪ ಅವರ ಧೋರಣೆ ಸರಿ ಇಲ್ಲ. ಸುಧಾಕರ್ ಯಾರು ನಮಗೆ? ಸುಧಾಕರ್​ ನನ್ನ ಮೇಲೇ ಏನಾದರೂ ಹಗೆ ತನ ಮಾಡಿಕೊಳ್ಳಲಿ ಅಥವಾ ನನ್ನನ್ನು ನೇಣಿಗೆ ಹಾಕಲಿ. ಮೆಡಿಕಲ್ ಕಾಲೇಜು ನನ್ನ ಕನಸಿನ ಯೋಜನೆ. ಯಾವುದೇ ಕಾರಣಕ್ಕೂ ಅದನ್ನು ಬಿಟ್ಟು ಕೊಡುವ ಮಾತೇ ಇಲ್ಲ ಎಂದರು ಅವರು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಬಗ್ಗೆ ನಾನು ಮಾತನಾಡುವುದಿಲ್ಲ. ಪಾಪ, ನಾನು ಮಾತಾನಾಡುವುದರಿಂದ ಅವರ ಕುರ್ಚಿಗೆ ಸಮಸ್ಯೆ ಆಗುವುದು ಬೇಡ. ನನ್ನ ಜೊತೆ ಯಡಿಯೂರಪ್ಪ ಏನು ಮಾತನಾಡಿಲ್ಲ. ಆದರೆ, ಕೆಲ ಬಿಜೆಪಿ ಸ್ನೇಹಿತರು ನನಗೆ ಶುಭ ಕೋರಿದ್ದಾರೆ. ಅವರ ಹೆಸರು ಇವಾಗ ಹೇಳೋದು ಬೇಡ ಬಿಡಿ ಎಂದರು.

ಅ 30 ದೆಹಲಿಯ ಹೈಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ಇದೆ ಹೋಗಬೇಕು. ಆರೋಗ್ಯ ತಪಾಸಣೆ ಮಾಡಿಸಬೇಕಿದೆ.ನಿನ್ನೆ ವಕೀಲರನ್ನು ಭೇಟಿ ಮಾಡಲು ಆಗಲಿಲ್ಲ.ಇವತ್ತು ಅವರನ್ನು ಭೇಟಿ ಮಾಡುತ್ತೇನೆ ಎಂದರು.

ಇನ್ನು ಪಕ್ಷದ ಅಧ್ಯಕ್ಷರು ಉಪ ಚುನಾವಣೆಗಳ ಬಗ್ಗೆ ತಮ್ಮ ಜೊತೆ ಚೆರ್ಚೆ ನಡೆಸಿಲ್ಲ. ಎರಡು ತಿಂಗಳ ಮೇಲಾಯಿತು ನನ್ನ ದೂರವಾಣಿ ಸಂಪರ್ಕ ಕಡಿತಗೊಂಡು, ಯಾರಿಗೂ ಸಂಪರ್ಕಕ್ಕೆ ಸಿಗಲಿಲ್ಲ. ಮೊಬೈಲ್ ಸಿಮ್ ಬೇರೆ ತರಿಸಿಕೊಂಡು ನಾಯಕರ ಜೊತೆ ಮಾತಾಡುತ್ತೇನೆ ಎಂದು ಅವರು ಹೇಳಿದರು. ಉಪ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಎದುರಾಗುತ್ತೇನೆ ಎಂಬ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಂಟಿಬಿ ನಾಗರಾಜ್ ಅವರು ದೊಡ್ಡವರು. ಸಮಯ ಬಂದಾಗ ಉತ್ತರ ಕೊಡುತ್ತೇನೆ ಎಂದು ಚುಟುಕಾಗಿ ಎಚ್ಚರಿಕೆ ನೀಡಿದರು.

ಸದ್ಯ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಮನೆಗೆ ಹೋಗುತ್ತೇನೆ. ನಮ್ಮ ಹುಡುಗ ಅವನು, ನಮ್ಮ ಕ್ಷೇತ್ರದವನು ಎಂದರು.

SCROLL FOR NEXT