ರಾಜಕೀಯ

ಸಿಎಂ ಯಡಿಯೂರಪ್ಪ, ಬಿಜೆಪಿ ಪರ ಕುಮಾರಸ್ವಾಮಿ ಹೇಳಿಕೆ: ರಾಜಕೀಯ ವಲಯದಲ್ಲಿ ಅಚ್ಚರಿ 

Sumana Upadhyaya

ಮೈಸೂರು: ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪ್ರವಾಹ ಕೆಲಸಗಳ ಬಗ್ಗೆ ಹೊಗಳಿದ್ದು ಮತ್ತು ಮಧ್ಯಂತರ ಚುನಾವಣೆಯನ್ನು ಅಪೇಕ್ಷಿಸುವುದಿಲ್ಲ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಯನ್ನುಂಟುಮಾಡಿದೆ.


ಯಡಿಯೂರಪ್ಪ ಸರ್ಕಾರ ಪತನಗೊಳ್ಳುವುದನ್ನು ನಿರೀಕ್ಷಿಸುವುದಿಲ್ಲ ಎಂದು ಕೂಡ ಕುಮಾರಸ್ವಾಮಿಯವರು ಹೇಳಿದ್ದಾರೆ. ಹೀಗೆ ಏಕಾಏಕಿ ಯಡಿಯೂರಪ್ಪ ಮತ್ತು ಬಿಜೆಪಿ ಬಗ್ಗೆ ಕುಮಾರಸ್ವಾಮಿಯವರು ಮೃದು ಧೋರಣೆ ತಳೆದಿದ್ದೇಕೆ ಎಂದು ರಾಜಕೀಯ ನಾಯಕರು ಮತ್ತು ವಿಶ್ಲೇಷಕರು ಯೋಚನೆ ಮಾಡಲು ಆರಂಭಿಸಿದ್ದಾರೆ.


ಇತಿಹಾಸವನ್ನೊಮ್ಮೆ ನೋಡಿದರೆ ಕರ್ನಾಟಕ ರಾಜಕೀಯದಲ್ಲಿ 20:20 ಮೈತ್ರಿ ಸರ್ಕಾರ ರಚಿಸಿ ಕೈಸುಟ್ಟುಕೊಂಡವರು ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರು. ನಂತರ ಎಂದಿಗೂ ರಾಜಕೀಯದಲ್ಲಿ ಜೊತೆಯಾಗುವುದಿಲ್ಲ ಎಂದು ಹೇಳಿಕೊಂಡು ಬದ್ಧವೈರಿಗಳಂತೆ ಕಂಡವರು. 


ಇತ್ತ ಸಿದ್ದರಾಮಯ್ಯಾದಿಯಾಗಿ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರ ಉಪ ಚುನಾವಣೆ ನಂತರ ಪತನವಾಗಲಿದೆ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಕೂಡ ಹೇಳುತ್ತಿದ್ದಾರೆ. ಅದಕ್ಕೆ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್ ನಾಯಕರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಲು ಅಹಿಂದ ನಾಯಕರೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.


ಇನ್ನು ಕುಮಾರಸ್ವಾಮಿಯವರ ಹೇಳಿಕೆ ಬಗ್ಗೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರಲ್ಲಿ ಕೇಳಿದಾಗ, ನಾನು ಅದಕ್ಕೆ ಬಹಳ ಪ್ರಾಮುಖ್ಯತೆ ಕೊಡುವುದಿಲ್ಲ. ಜನತೆ ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನು ನೆನಪಿಸಿಕೊಳ್ಳುತ್ತಾರೆ ಎಂದಿದ್ದಾರೆ.


ಕುಮಾರಸ್ವಾಮಿಯವರು ರಾಜಕೀಯ ಲೆಕ್ಕಾಚಾರ ಇಟ್ಟುಕೊಂಡೇ ಈ ಹೇಳಿಕೆ ಕೊಟ್ಟಿದ್ದಾರೆ ಎನ್ನುತ್ತಾರೆ ವಿಶ್ಲೇಷಕರು. ಅನರ್ಹ ಶಾಸಕ ಎ ಎಚ್ ವಿಶ್ವನಾಥ್, ಕುಮಾರಸ್ವಾಮಿಯವರ ಈ ಹಠಾತ್ ಹೇಳಿಕೆ ಅಚ್ಚರಿಯನ್ನುಂಟುಮಾಡಿದೆ. ತನಿಖೆಯ ಭಯದಲ್ಲಿ ಅವರು ಈ ಹೇಳಿಕೆ ಕೊಟ್ಟಿರಬಹುದು. ಜನರಿಗೆ ಕುಮಾರಸ್ವಾಮಿ ಎಂಬುದು ಏನೆಂದು ಗೊತ್ತಿದೆ. ಕಾಂಗ್ರೆಸ್-ಜೆಡಿಎಸ್ ವಿರುದ್ಧ ಜನತೆಯ ಮನೋಧರ್ಮ ಇರುವುದರಿಂದ ಇಂತಹ ಮಾತುಗಳು ಸಹಾಯವಾಗದು ಎನ್ನುತ್ತಾರೆ.

ಜೆಡಿಎಸ್ ನಲ್ಲಿ ಕೂಡ ಅಸಮಾಧಾನ: ಜೆಡಿಎಸ್ ನಲ್ಲಿ ಕೂಡ ಪರಿಸ್ಥಿತಿ ಒಡೆದ ಮನೆಯಂತಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಮುರಿದು ಬೀಳಲು ಕಾರಣರಾಗಿದ್ದ 17 ಶಾಸಕರಲ್ಲಿ ಜೆಡಿಎಸ್ ನವರೂ ಇದ್ದರು. ಇದೀಗ ಮತ್ತೊಂದು ಗುಂಪು ಜೆಡಿಎಸ್ ನಲ್ಲಿ ಕುಟುಂಬ ರಾಜಕಾರಣ ಮತ್ತು ಅಧಿಕಾರ ಕೇಂದ್ರವನ್ನು ವಿರೋಧಿಸುತ್ತಿದೆ. 
 

SCROLL FOR NEXT