ರಾಜಕೀಯ

ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಗೆ ಉರುಳಾದ ವಿಚಾರ ಯಾವುದು?

Shilpa D

ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ, ಶಿವಕುಮಾರ್ ಮತ್ತು ಅವರ ನಾಲ್ವರು ಸಹಚರರ ವಿರುದ್ಧ ಹಲವು ಊಹಾ ಪೋಹಗಳು ಕೇಳಿ ಬರುತ್ತಿವೆ.

ವಿವಿಧ ಪ್ರಕರಣಗಳಲ್ಲಿ ಒಟ್ಟು ನಾಲ್ಕು ದೂರು ದಾಖಲಿಸಿದ್ದ ಐಟಿ ಇಲಾಖೆಯ ತನಿಖಾ ವರದಿ ಆಧರಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಿಎಂಎಲ್‌ಎ ಕಾಯಿದೆಯಡಿ ಕೇಸ್‌ ದಾಖಲಿಸಿಕೊಂಡು ತನಿಖೆ ನಡೆಸಿದ್ದರು ಮತ್ತು ಹೆಚ್ಚಿನ ಮಾಹಿತಿಗಾಗಿ ನಾಲ್ಕು ದಿನಗಳಿಂದ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು

ಶಿವಕುಮಾರ್  ಅವರ ವ್ಯವಹಾರಗಳ ಪಾಲುದಾರರಾಗಿರುವ ಸಚಿನ್ ನಾರಾಯಣ್, ಸುನೀಲ್ ಕುಮಾರ್ ಶರ್ಮ, ದೆಹಲಿ ಕರ್ನಾಟಕ ಭವನದ  ನೌಕರ ಆಂಜನೇಯ ಹಾಗೂ ಸುಖದೇವ್ ವಿಹಾರಿನ ನಿವಾಸಿ ರಾಜೇಂದ್ರ ಹಣದ ಮೂಲದ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ್ದರು. 

2018ರ ಸೆಪ್ಟಂಬರ್ ನಲ್ಲಿ ಜಾರಿ ನಿರ್ದೇಶನಾಲಯ ಈ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಆದಾಯ ತೆರಿಗೆ ಅಧಿಕಾರಿಗಳು ದಾಖಲಿಸಿದ್ದ ಎಫ್ ಐ ಆರ್ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿತ್ತು. 

ಶಿವಕುಮಾರ್ ಮತ್ತು ಅವರ ನಾಲ್ವರು ಸಹಚರರ ವಿರುದ್ಧ ದಾಖಲಿಸಿದ್ದ ಪ್ರಕರಣದ ತನಿಖೆ ಮಾಹಿತಿಗಳು ಹೇಗೆ ಬಿಜೆಪಿಗೆ ಸೋರಿಕೆಯಾಯಿತು ಎಂಬದನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿ ಭಟನೆ ನಡೆಸಿತ್ತು.

ಬಿಜೆಪಿ ವಕ್ತಾರ ಸಂಬತ್ ಪಿತ್ರಾ ಅವರಿಗೆ ಶಿವಕುಮಾರ್ ವಿರುದ್ದ ದಾಖಲಾದ ಪ್ರಕರಣದ ಸಂಬಂಧದ ಎಲ್ಲಾ ದಾಖಲೆಗಳು ಲಭಿಸಿದ್ದವು, ಹಾಗಾಗಿ ಆದಾಯ ತೆರಿಗೆ ಮತ್ತು ಇಡಿಯಿಂದ ತನಿಖಾ ವಿಷಯ ಹೇಗೆ ಸೋರಿಕೆಯಾಯಿತು ಎಂಬುದನ್ನು ಕಾಂಗ್ರೆಸ್ ಪ್ರಶ್ನಿಸಿತ್ತು.

ಐಟಿ ದಾಳಿ ನಂತರ ಕೆಲವು ದಾಖಲೆಗಳನ್ನು ಸಂಬತ್ ಪಿತ್ರಾ ದೆಹಲಿಯಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ಅದರಲ್ಲಿ ಎಐಸಿಸಿ ಕಚೇರಿಗೆ ಬಹು ದೊಡ್ಡ ಮೊತ್ತದ ಹಣ ವರ್ಗಾವಣೆ ಆಗಿದ್ದರ ಬಗ್ಗೆ ಉಲ್ಲೇಖವಿತ್ತು. ಶಿವಕುಮಾರ್ ಚಾಲಕನ ಹೇಳಿಕೆ ಮೇಲೆ ಐಟಿ ದೂರು ದಾಖಲಿಸಿಕೊಂಡಿತ್ತು. ಈ ಎಲ್ಲಾ ಮಾಹಿತಿ ಬಿಜೆಪಿ ವಕ್ತಾರ ಸಂಬತ್ ಪಿತ್ರಾ ಅವರಿಗೆ ಹೇಗೆ ದೊರಕಿತ್ತು ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತ ಪಡಿಸಿತ್ತು. 

ಕಲ್ಲು ಗಣಿಗಾರಿಕೆ, ರಿಯಲ್‌ ಎಸ್ಟೇಟ್‌ ವ್ಯವಹಾರ, ಸಾರಿಗೆ ವ್ಯವಹಾರಗಳಲ್ಲಿ ಪಾಲುದಾರಿಕೆ, ನಾನಾ ಕಂಪನಿಗಳಲ್ಲಿ ಷೇರು ಖರೀದಿ, ಕೇಬಲ್‌ ವ್ಯವಹಾರವನ್ನು ಡಿ.ಕೆ.ಶಿವಕುಮಾರ್‌ ನಡೆಸುತ್ತಿದ್ದು, ತಾಯಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ, ಪುತ್ರಿ ಮೂಲಕ ವಿವಿಧ ಕಂಪನಿಗಳಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಒಟ್ಟಾರೆ ಸಾವಿರ ಕೋಟಿ ರೂ. ಆಸ್ತಿ ಹೊಂದಿದ್ದಾರೆ. 2017ರ ಆ.2ರಿಂದ ಆ.5ರವರೆಗೆ ರಾಜ್ಯದ ನಾನಾ ಕಡೆ ಹಾಗೂ ದಿಲ್ಲಿ ಸೇರಿ ಒಟ್ಟು 67 ಕಡೆ ನಡೆಸಿದ್ದ ದಾಳಿ ವೇಳೆ ನೂರಾರು ಕೋಟಿ ರೂ. ಅಘೋಷಿತ ಆಸ್ತಿಯನ್ನು ಐಟಿ ಇಲಾಖೆ ಪತ್ತೆ ಮಾಡಿತ್ತು. ಆದರೆ, ದಿಲ್ಲಿಯ ಸಫ್ದರ್‌ಜಂಗ್‌ ಎನ್‌ಕ್ಲೇವ್‌ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗಳಲ್ಲಿ ದೊರಕಿದ್ದ 8.59 ಕೋಟಿ ರೂ. ಡಿಕೆಶಿ ಅವರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ.

SCROLL FOR NEXT