ರಾಜಕೀಯ

ಬಿಎಸ್ ವೈ ಸರ್ಕಾರದಲ್ಲಿ ಮತ್ತೆ ಎರಡು ಡಿಸಿಎಂ ಹುದ್ದೆ?, ತಾವು ಡಿಸಿಎಂ ಆಕಾಂಕ್ಷಿ ಅಲ್ಲ ಎಂದ ಎಚ್.ವಿಶ್ವನಾಥ್

Lingaraj Badiger

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಆಡಳಿತಕ್ಕೆ ನೆರವಾಗಲಿ ಎಂದು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿ ನೇಮಕ ಮಾಡಲಾಗಿದೆ. ಹತ್ತು ಮಂದಿ ಉಪ ಮುಖ್ಯಮಂತ್ರಿ ಗಳನ್ನೂ ನೇಮಿಸಿದರೂ ಯಾವುದೇ ತೊಂದರೆ ಇಲ್ಲ ಎಂದು ಜೆಡಿಎಸ್ ಅನರ್ಹ ಶಾಸಕ ಎಚ್.ವಿಶ್ವನಾಥ್ ಶನಿವಾರ ಹೇಳಿದ್ದಾರೆ.

ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಸ್ಥಾನ ಮಾನಕ್ಕೆ ಯಾವುದೇ ಸಂವಿಧಾನಾತ್ಮಕ ಮಹತ್ವ ಇಲ್ಲ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ, ಯಾರನ್ನು ಬೇಕಾದರೂ ಉಪಮುಖ್ಯಮಂತ್ರಿಗಳನ್ನಾಗಿ ಮಾಡಲಿ. ಎಷ್ಟು ಮಂದಿಯನ್ನು ಬೇಕಾದರೂ ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಬಹುದು. ಅನರ್ಹ ಶಾಸಕರದರೂ ಇರಲಿ, ಯಾರಾದರೂ ಇರಲಿ, ಹತ್ತು ಮಂದಿಯನ್ನು ಬೇಕಾದರೂ ಡಿಸಿಎಂ ಮಾಡಬಹುದು‌. ಅದರಲ್ಲಿ ತಪ್ಪೇನು ಇಲ್ಲ ಎಂದರು.

ಬಿಎಸ್ ವೈ ಸರ್ಕಾರದಲ್ಲಿ ಮತ್ತೆ ಎರಡು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಸಚಿವ ಸ್ಥಾನ, ಉಪ ಮುಖ್ಯಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ ಎಂದರು.

ಸೆ.11ರಂದು ಸುಪ್ರಿಂಕೋರ್ಟ್ ಮುಂದೆ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಬರಲಿದ್ದು, ಮುಂದೆ ಏನಾಗುತ್ತದೋ? ನೋಡೋಣ ಎಂದ ಅವರು, ಆದರೆ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಮತ್ತೆ ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈ ಮೊದಲೇ ಘೋಷಿಸಿದ್ದೇನೆ. ತಮ್ಮ ಮಗ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾನೆ. ಪಕ್ಷ ಟಿಕೆಟ್ ನೀಡಿದರೆ ನೋಡೋಣ ಎಂದು ಉತ್ತರಿಸಿದರು.

ಮೂರು ಜನ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿ ಟೀಕೆಗೆ ಗುರಿ ಆಗಿರುವ ಬಿಜೆಪಿ ಈಗ ಅತೃಪ್ತರನ್ನು ನಿಭಾಯಿಸುವ ಉದ್ದೇಶದಿಂದ ಇನ್ನೂ ಎರಡು ಡಿಸಿಎಂ ಹುದ್ದೆ ಸೃಷ್ಟಿಸಲು ಮುಂದಾಗಿದೆ.

ಈಗಾಗಲೇ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಅಶ್ವತ್ಥನಾರಾಯಣ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಿರುವ ಬಿಜೆಪಿ ಇನ್ನೂ ಇಬ್ಬರನ್ನು ಉಪಮುಖ್ಯಮಂತ್ರಿ ಮಾಡುವ ಯೋಚನೆಯಲ್ಲಿದೆ ಎನ್ನಲಾಗಿದೆ.

SCROLL FOR NEXT