ಬೆಳಗಾವಿ: ಸಮ್ಮಿಶ್ರ ಸರ್ಕಾರದಲ್ಲಿದ್ದ ಪ್ರತಿಕೂಲ ಪರಿಸ್ಥಿತಿಯಿಂದಾಗಿ 20 ಶಾಸಕರು ರಾಜೀನಾಮೆ ನೀಡಬೇಕಾಯಿತು. ಕೈಗೊಂಬೆಯಂತಿದ್ದರೆ ಪಕ್ಷ ಗುರುತಿಸುತ್ತಿದೆ, ಅವರಿಗೆ ಪ್ರಾಮಾಣಿಕ ಮುಖಂಡರು ಇಷ್ಟವಾಗುವುದಿಲ್ಲ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ್ ನಲ್ಲಿ ನಡೆದ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮನ್ನು ಸೇರಿದಂತೆ 20 ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿರುವುದು ಕಾನೂನು ಬಾಹಿರವಾಗಿದೆ. ನಾಳೆಯೇ ಚುನಾವಣೆ ನಡೆದರೂ ತಾನೂ ಸ್ಪರ್ಧಿಸುವುದಾಗಿ ತಿಳಿಸಿದರು.
ಅನೇಕರು ಆರೋಪಿಸಿರುವಂತೆ ಆಪರೇಷನ್ ಕಮಲಕ್ಕೆ ಬಲಿಯಾಗಿಲ್ಲ. ಸತೀಶ್ ಜಾರಕಿಹೊಳಿ, ಎಂ ಬಿ ಪಾಟೀಲ್ ಅಂತಹವರು ಆಪರೇಷನ್ ಕಮಲಕ್ಕೆ ಯತ್ನಿಸಿದ್ದಾರೆ ನಾನಲ್ಲ, ಕಾಂಗ್ರೆಸ್ ಪಕ್ಷವನ್ನು ತೊರೆಯುವ ಉದೇಶ ತಮ್ಮಗಿಲ್ಲ ಎಂದು ಸ್ಪಷ್ಪಪಡಿಸಿದರು.
ಈ ಮಧ್ಯೆ ಮಾತನಾಡಿದ ಸತೀಶ್ ಜಾರಕಿಹೊಳಿ, ಪ್ರವಾಹ ಪೀಡಿತರ ಸಮಸ್ಯೆ ಆಲಿಸುವ ಬದಲು ರಾಜಕೀಯ ಸಮಾವೇಶ ನಡೆಸುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಗೋಕಾಕ ಕ್ಷೇತ್ರದಲ್ಲಿ ನಮ್ಮ ಕುಟುಂಬದ ನಡುವೆ ಯುದ್ಧ ನಡೆಯಲಿದೆ ಎಂದು ಹೇಳಿದರು.