ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಡಿ ಕೆ ಶಿವಕುಮಾರ್ ಜೈಲು ಸೇರಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಐಟಿ, ಜಾರಿ ನಿರ್ದೇಶನಾಲಯ(ಇಡಿ) ಕೇಂದ್ರೀಯ ಸಂಸ್ಥೆಗಳೆಂಬ ಕನಿಷ್ಠ ಜ್ಞಾನವೂ ಕಟೀಲ್ಗೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಸೋಮವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಕಟೀಲು ದುರುದ್ದೇಶದಿಂದ ಈ ಕುರಿತು ಹೇಳಿದ್ದಾರೆ. ಐಟಿ,ಇಡಿ ಯಾರ ಅಧೀನದಲ್ಲಿದೆ ಅನ್ನೋದು ಅವರಿಗೆ ಗೊತ್ತಿಲ್ಲ. ಇವೆಲ್ಲ ಕೇಂದ್ರ ಸರ್ಕಾರದ ಅಧೀನದಲ್ಲಿವೆ. ಹುಳಿ ಹಿಂಡುವುದು,ಬೆಂಕಿ ಹಚ್ಚೋದು ಬಿಜೆಪಿಯವರ ಕೆಲಸವಾಗಿದೆ. ಬಿಜೆಪಿಯವರು ಕನಿಷ್ಠ ಜ್ಙಾನ ಇಲ್ಲದ ಕಟೀಲ್ರನ್ನು ರಾಜ್ಯಾಧ್ಯಕ್ಷರನ್ನಾಗಿ ಏಕೆ ಮಾಡಿದರೋ ಗೊತ್ತಿಲ್ಲ ಎಂದರು.
ಯಡಿಯೂರಪ್ಪ ಬಂದ ಮೇಲೆ ವರ್ಗಾವಣೆ ದಂಧೆ, ದ್ವೇಷದ ರಾಜಕಾರಣ ಇಷ್ಟೇ ಅವರ ಕೆಲಸವಾಗಿದೆ. ಪ್ರವಾಹದಿಂದ ಸಾವಿರಾರು ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರಿಗೆ ಯಾವ ಪರಿಹಾರವನ್ನೂ ಇನ್ನೂ ಕೊಟ್ಟಿಲ್ಲ. ಅವರ ಬಗ್ಗೆ ಸರ್ಕಾರಕ್ಕೆ ಕಾಳಜಿಯಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.