ರಾಜಕೀಯ

ಬಲವಂತವಾಗಿ ಹಿಂದಿ ಹೇರಿಕೆಗೆ ಅಮಿತ್ ಶಾ ಯತ್ನ ಸರಿಯಲ್ಲ: ಸಿದ್ದರಾಮಯ್ಯ

Lingaraj Badiger

ಮೈಸೂರು: ದೇಶದಲ್ಲಿ ಪ್ರಾದೇಶಿಕ ಭಾಷೆ ಮಾತನಾಡುವವರ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಯತ್ನಿಸುತ್ತಿರುವುದು ಸರಿಯಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ 22ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳಿವೆ. ಹಿಂದಿ ಭಾಷೆಯನ್ನು ಹೇರಿಕೆ ಮಾಡಬಾರದು ಮತ್ತು ಕರ್ನಾಟಕದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ಕಲ್ಪಿಸಬೇಕು. ಈ ವಿಚಾರದಲ್ಲಿ ಅನಗತ್ಯ ವಿಳಂಬ ಸಲ್ಲದು ಎಂದರು.

ತಮಗೆ ಹಿಂದಿ ಕಲಿಯಲು ಆಕ್ಷೇಪಣೆಯಿಲ್ಲ. ಆದರೆ, ಅದನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಹಿಂದಿ ಕೂಡ ಕನ್ನಡ ಹಾಗೂ ಇತರ ಭಾಷೆಗಳಂತೆ ಒಂದು ಭಾಷೆಯಷ್ಟೇ. ಅದನ್ನು ದೇಶದ ರಾಷ್ಟ್ರೀಯ ಇಲ್ಲವೇ ಅಧಿಕೃತ ಭಾಷೆಯನ್ನಾಗಿ ಪರಿಗಣಿಸಲಾಗಿಲ್ಲ ಎಂದರು.

ಇದೇ ವೇಳೆ, ನೆರೆ ಸಂತ್ರಸ್ಥರಿಗೆ 4 - 5 ದಿನದಲ್ಲಿ ಸಿಹಿ ಸುದ್ದಿ ಸಿಗಲಿದೆ. ಕೇಂದ್ರ ಸರ್ಕಾರ ಪರಿಹಾರ ನೀಡಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ''ಇದರಲ್ಲಿ ಸಿಹಿ ಏನಿದೆ. ಘಟನೆ ನಡೆದು 45 ದಿನಗಳಿಂದ ಪರಿಹಾರ ನೀಡಿರಲಿಲ್ಲವಲ್ಲ. ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವುದು ಕೇಂದ್ರ ಸರಕಾರದ ಕರ್ತವ್ಯ'' ಎಂದರು.

SCROLL FOR NEXT