ಮೈಸೂರು: ಜಮೀನುದಾರರ ಕುಟುಂಬದಲ್ಲಿ ಜನಿಸಿರುವ ತಮಗೆ ಅಯೋಗ್ಯನಂತೆ ಯಾರ ಮನೆಯಲ್ಲಿಯೂ ಚಡ್ಡಿ ತೊಳೆಯುವ ದುಃಸ್ಥಿತಿ ಬಂದಿಲ್ಲ ಎಂದು ಅನರ್ಹ ಜೆಡಿಎಸ್ ಶಾಸಕ ಹೆಚ್.ವಿಶ್ವನಾಥ್, ಮಾಜಿ ಸಚಿವ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ವಿರುದ್ಧ ಏಕವಚನದಲ್ಲಿ ಗದಾಪ್ರಹಾರ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ಶ್ರೀಮಂತ ಕುಟುಂಬ. ಯಾವುದೇ ಚಲನಚಿತ್ರ ನಿರ್ಮಿಸಿಲ್ಲ . ಯಾರ ಮನೆಯ ಎಂಜಲನ್ನೂ ತೊಳೆದಿಲ್ಲ. ರಾಮದಾಸ್ ಮನೆಯಲ್ಲಿ ಚಡ್ಡಿ ಒಗೆದಿಲ್ಲ. ತಾಕತ್ತು ಇರುವುದೇ ಆದಲ್ಲಿ ನೇರಾನೇರ ಬಹಿರಂಗ ಚರ್ಚೆಗೆ ಬಾ ಎಂದು ಸಾ.ರಾ.ಮಹೇಶ್ ಗೆ ಸವಾಲು ಹಾಕಿದರು.
ನಮ್ಮನ್ನು ಅನರ್ಹರು ಎಂದು ಮಾಧ್ಯಮಗಳು ಉಲ್ಲೇಖಿಸಬಾರದು. ಯಾವುದೇ ಶಾಸಕರು ತಮ್ಮನ್ನು ತಾವು ಹಣಕ್ಕಾಗಿ ಮಾರಿಕೊಂಡವರಲ್ಲ. ಅಧಿಕಾರ, ಪದವಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಇದು ರಾಜ್ಯದಲ್ಲಿದ್ದ ರಾಕ್ಷಸ ರಾಜಕಾರಣ, ಕ್ರಿಯಾಶೀಲತೆಯ ಪತನದಿಂದ ತೆಗೆದುಕೊಂಡ ನಿರ್ಧಾರ ಎಂದು ವಿಶ್ವನಾಥ್ ಹೇಳಿದರು.