ಬೆಳಗಾವಿ: ಉಪಚುನಾವಣೆ ಐಎಎಸ್ ಪರೀಕ್ಷೆ ಇದ್ದ ಹಾಗೆ. ಪರೀಕ್ಷೆ ಇದ್ದಾಗಲೇ ನಾವು ಎದುರಿಸಬೇಕು.ಸಿಕ್ಕ ಸಿಕ್ಕಾಗ ಹೋಗಲು ಆಗುವುದಿಲ್ಲ ಎಂದು ಹೇಳುವ ಮೂಲಕ ಸಹೋದರ ರಮೇಶ್ ಜಾರಕಿಹೊಳಿಗೆ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಲಖನ್ ಜಾರಕಿಹೊಳಿ ಮಾತಿನಲ್ಲಿಯೇ ಚಾಟಿ ಬೀಸಿದ್ದಾರೆ.
ಗೋಕಾಕ್ ನಲ್ಲಿ ಕೆಲ ಹಳ್ಳಿಗಳಲ್ಲಿ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜನರು ಇಷ್ಟು ದಿನ ನಮಗೆ ರಾಜಕೀಯಕ್ಕೆ ಏಕೆ ಬರುತ್ತಿಲ್ಲ ಎಂದು ಕೇಳುತ್ತಿದ್ದರು. ಈಗ ಆ ಸಮಯ ಬಂದಿದೆ. 25 ವರ್ಷಗಳಿಂದ ನಾವು ನಮ್ಮ ತಂದೆಯವರು ಕಾಂಗ್ರೆಸ್ನಲ್ಲಿಯೇ ಇದ್ದೇವೆ. ನಾವು ಹಿಂದೆ ನಿಂತು ಬೆಂಬಲ ನೀಡುತ್ತಿದ್ದೆವು. ಆದರೆ, ಈಗ ಕಾಲ ಕೂಡಿ ಬಂದಿದೆ.
ನಾವು ಸಹ ಈಗ ಮುನ್ನೆಲೆಗೆ ಬಂದು ನಿಂತಿದ್ದೇವೆ.ರಮೇಶ್ ಜಾರಕಿಹೊಳಿ ಅಳಿಯಂದಿರಿಂದ ಗೋಕಾಕ್ನಲ್ಲಿ ಭ್ರಷ್ಟಾಚಾರ ನಡೆದಿದೆ. ಅವರ ಆಳ್ವಿಕೆಯನ್ನು ನಾವು ಗೋಕಾಕ್ನಲ್ಲಿ ಅಂತ್ಯಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.