ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾ ಯಾರದ್ದೋ ಹಣ, ಇನ್ಯಾರದ್ದೋ ಪಕ್ಷದಲ್ಲಿ ಬೆಳೆದುಬಂದಿರುವ ರಾಜಕಾರಣಿ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಸಿದ್ದರಾಮಯ್ಯ ಸಾಕಿರುವ ಗಿಣಿ ಅಲ್ಲ. ತಮ್ಮನ್ನು ರಾಮನಗರ ಜಿಲ್ಲೆಯ ಜನ ಬೆಳೆಸಿದ್ದಾರೆ. ಸಿದ್ದರಾಮಯ್ಯನವರಿಂದ ತಾವೇನು ಬೆಳೆದಿಲ್ಲ.ದೇವೇಗೌಡರು ಸಿದ್ದರಾಮಯ್ಯ ನವರಂತಹ ಗಿಣಿಗಳನ್ನು ಸಾಕಷ್ಟು ಬೆಳೆಸಿದ್ದಾರೆ. ಆದರೆ ದೇವೇಗೌಡರು ಸಾಕಿ ಬೆಳೆಸಿದ ಗಿಣಿಗಳೇ ನಮ್ಮಗಳನ್ನು ಯಾವ ರೀತಿ ಕುಕ್ಕಿವೆ ಎನ್ನುವುದು ಚೆನ್ನಾಗಿಯೇ ಗೊತ್ತಿದೆ. ಮೈತ್ರಿ ಸರ್ಕಾರದಲ್ಲಿ ತಾವು ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್ ಹೈಕಮಾಂಡ್ ನಿಂದಲೇ ಹೊರತು ಈ ಸಿದ್ದರಾಮಯ್ಯ ಅವರಿಂದ ಅಲ್ಲ. ತಾವು ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲಾಗದ ಸಿದ್ದರಾಮಯ್ಯ ಕೊನೆಗೆ ಮೈತ್ರಿ ಸರ್ಕಾರವನ್ನೇ ಕೆಡವಿಬಿಟ್ಟರು ಎಂದು ಆಕ್ರೋಶವ್ಯಕ್ತಪಡಿಸಿದರು.
ನಾವು ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ. ಆದರೆ ಸಿದ್ದರಾಮಯ್ಯ ಇದೂವರೆಗೂ ಯಾವುದೇ ಪಕ್ಷವನ್ನು ಕಟ್ಟಲೂ ಇಲ್ಲ, ಬೆಳೆಸಲೂ ಇಲ್ಲ. ಜೆಡಿಎಸ್ ನಿಂದ ಕಾಂಗ್ರೆಸ್ ಸೇರಿ ಕಾಂಗ್ರೆಸ್ ನಿಂದ ಶಕ್ತಿ ಪಡೆದುಕೊಂಡರೇ ವಿನಃ ಅವರಿಗೆ ರಾಜಕೀಯವಾಗಿ ಬೆಳೆಯುವ ಸ್ವದಾಮರ್ಥ್ಯವಾಗಲಿ ಶಕ್ತಿ ಆಗಲಿ ಇಲ್ಲ. ಸಿದ್ದರಾಮಯ್ಯಗೆ ನಿಜವಾಗಲೂ ರಾಜಕೀಯ ಶಕ್ತಿ ಇರುವುದೇ ಆದಲ್ಲಿ ಅವರು ಕಾಂಗ್ರೆಸ್ ನಿಂದ ಹೊರಬಂದು ಸ್ವಂತ ಪಕ್ಷವನ್ನು ಕಟ್ಟಿ ತೋರಿಸಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು. ಸಿದ್ದರಾಮಯ್ಯ ಅವರನ್ನು ಶಕ್ತಿಯನ್ನಾಗಿ ಮಾಡಿ ರೂಪಿಸಿದ್ದು ತಮ್ಮ ತಂದೆ ಹೆಚ್.ಡಿ.ದೇವೇಗೌಡ. ಸಿದ್ದರಾಮಯ್ಯ ಅವರು ಆಯೋಜಿಸಿದ್ದ ಕಾರ್ಯಕ್ರಮಗಳಿಗೆ ನಮ್ಮ ಜನರನ್ನು ಕಳುಹಿಸಿ, ನನ್ನ ಹಣ ಖರ್ಚು ಮಾಡಿದ್ದೇನೆ. ಹಿಂದೆ ಅವರು ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮವೊಂದರ ಬ್ಯಾನರ್ ನಲ್ಲಿ ತಮ್ಮ ಫೋಟೋ ಹಾಕಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡು ಮನೆಯಲ್ಲಿಯೇ ಕೂತವರು ಅವರು ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ಕ್ಷೇತ್ರಗಳ ಉಪಸಮರ ಮೂರು ರಾಜಕೀಯ ಪಕ್ಷಗಳಿಗೂ ಅಗ್ನಿಪರೀಕ್ಷೆಯಾಗಿದೆ. ಸೆ 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವುದರಿಂದ ಇನ್ನೆರಡು ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದರು. ಉಪಚುನಾವಣಾ ಕಣ ಎಲ್ಲಾ ಪಕ್ಷಗಳಿಗೂ ಸತ್ವಪರೀಕ್ಷೆಯಾಗಿದ್ದು, ಚುನಾವಣೆಯಲ್ಲಿ ಹೆಚ್ಚು ಸ್ಥಾನವನ್ನು ಪಕ್ಷ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗೆಲವು ಸಾಧಿಸಲು ಜೆಡಿಎಸ್ ತನ್ನದೆರ ಅದ ರಾಜಕೀಯ ತಂತ್ರಗಾರಿಗೆ ರೂಪಿಸಲಿದ್ದು e ಎಲ್ಲಾ ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರಿಗೆ ಟಿಕೆಟ್ ನೀಡಲಾಗುತ್ತಿದೆ. ಉಪ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಹೊಸ ನಾಟಕ ಆರಂಭವಾಗಲಿದೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.
ಮೈಸೂರಿನಲ್ಲಿ ಸೋಮವಾರ ಹೃದಯಾಘಾತದಿಂದ ಮೃತಪಟ್ಟಿರುವ ಜೆಡಿಎಸ್ ಮುಖಂಡ ಕೆ.ಜಿ.ಕೊಪ್ಪಲು ನಾರಾಯಣ ಗೌಡ ನಿಧನಕ್ಕೆ ಸಂತಾಪ ಸೂಚಿಸಿದ ಹೆಚ್.ಡಿ. ಕುಮಾರಸ್ವಾಮಿ,ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮಾಜಿ ಸಚಿವ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್ ಸೇರಿದಂತೆ ಅನೇಕ ಜೆಡಿಎಸ್ ಮುಖಂಡರು ಸಂತಾಪ ಸೂಚಿಸಿದರು. ಅತಿವೃಷ್ಟಿಯಿಂದ ಹಾನಿಗೊಳಗಾದ ಚನ್ನಪಟ್ಟಣದ ಎಪಿಎಂಸಿ ಕ್ವಾಟ್ರಸ್ ನ 72 ಕುಟುಂಬಗಳಿಗೆ ಕುಮಾರಸ್ವಾಮಿ ವೈಯಕ್ತಿಕವಾಗಿ ತಲಾ 5000 ರೂ. ಪರಿಹಾರ ಘೋಷಿಸಿದರು.