ರಾಜಕೀಯ

ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿಗೆ ಪ್ರಶ್ನೆ ಜೊತೆ ಸಲಹೆಯನ್ನೂ ನೀಡಿದ ದೇವೇಗೌಡ

Lingaraj Badiger

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಕೊರೋನಾ ಲಸಿಕೆ ಕುರಿತು ಪ್ರಧಾನಿಗೆ ಪ್ರಶ್ನೆಗಳ ಜೊತೆಗೆ ಸಲಹೆಯನ್ನೂ ನೀಡಿದ್ದಾರೆ.

ವ್ಯಾಕ್ಸಿನ್ ಸಂಬಂಧ ಸಭೆ, ಪ್ರಯೋಗಾಲಯಗಳಿಗೆ ಪ್ರಧಾನಿ ಭೇಟಿ ಕೊಟ್ಟಿದ್ದು ವಿಶ್ವಾಸ, ಭರವಸೆ ಮೂಡಿಸಿದೆ. ಲಸಿಕೆ ಸಂಬಂಧಿಸಿದ ವೆಚ್ಚವನ್ನು ಯಾರು ಭರಿಸುತ್ತಾರೆ. ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಭರಿಸಲಿದೆಯೋ? ಇಲ್ಲವೇ ರಾಜ್ಯ ಸರ್ಕಾರವೂ ಪಾಲು ಕೊಡಬೇಕೇ? ನಮ್ಮ ಬೇಡಿಕೆ ತುಂಬಾ ಇರುವುದರಿಂದ ಬೇರೆ ದೇಶದಿಂದಲೂ ವ್ಯಾಕ್ಸಿನ್ ಪಡೆಯಬೇಕಿದೆಯಾ? ಮೂರನೇ ಹಂತದ ಲಸಿಕೆ ಪ್ರಯೋಗ ನಡೆಯುತ್ತಿದ್ದು, ಈ ಸಂಬಂಧ ಕಾರ್ಯಕ್ಷಮತೆ ಮತ್ತು ಭದ್ರತೆ ಎಷ್ಟಿದೆ? ಮೊದಲನೇ ಹಂತದಲ್ಲಿ ಎಷ್ಟು ಜನರಿಗೆ ಲಸಿಕೆ ಸಿಗಲಿದೆ? ಎಂದು ದೇವೇಗೌಡ ಪ್ರಶ್ನೆಗಳನ್ನು ಕೇಳಿದ್ದಾರೆ.

ಇದರೊಂದಿಗೆ ಕೆಲವು ಸಲಹೆಗಳನ್ನೂ ನೀಡಿರುವ ಎಚ್.ಡಿ ದೇವೇಗೌಡ, ಲಸಿಕೆಯ ಸಂಗ್ರಹ ಮತ್ತು ಸಾಗಣೆ ನಮಗೆ ದೊಡ್ಡ ಸವಾಲಾಗಿದೆ. ಇದನ್ನು ಉನ್ನತಮಟ್ಟದ ಸಮಿತಿಯೇ ನಿಭಾಯಿಸಲಿ. ಇದು ನೇರವಾಗಿ ಪ್ರಧಾನಿಗೆ ವರದಿ ಮಾಡುವಂತಹ ಸಮಿತಿಯಾಗಿರಲಿ ಎಂದು ದೇವೇಗೌಡ ಹೇಳಿದ್ದಾರೆ.

ಲಸಿಕೆಯನ್ನು ದೀರ್ಘಾವಧಿವರೆಗೆ ಶೀತಲ ಕೇಂದ್ರದಲ್ಲಿ ಇಡಬೇಕಿರುವುದರಿಂದ ಐಐಟಿ ನೆರವು ಪಡೆಯಬೇಕು. ಲಸಿಕೆ ಕೈಗೆಟುಕುವ ದರದಲ್ಲಿ ದೊರೆಯಬೇಕು. ಸಾಧ್ಯವಾದಷ್ಟು ಉಚಿತವಾಗಿ ಕೊಡುವಂತೆ ಕ್ರಮಕೈಗೊಳ್ಳಲಿ ಎಂದು ದೇವೇಗೌಡರು ತಿಳಿಸಿದ್ದಾರೆ.

SCROLL FOR NEXT