ರಾಜಕೀಯ

ಸಾರಿಗೆ ನೌಕರರ ಹೋರಾಟದ ಪರ ನಿಂತ ಡಿ.ಕೆ.ಶಿವಕುಮಾರ್

Lingaraj Badiger

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರಾಜ್ಯ ಹಾಗೂ ನಗರ ರಸ್ತೆ ಸಾರಿಗೆ ಸಂಸ್ಥೆ ನೌಕರರ ಪರವಾಗಿ ಕಾಂಗ್ರೆಸ್ ನಿಂತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬೆಂಗಳೂರಿನ ಬನಶಂಕರಿ ಬಸ್ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಭೇಟಿ ಮಾಡಿ ಅವರ ಅಹವಾಲು ಆಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್, ಪ್ರತಿಭಟನನಿರತ ನೌಕರರ ಒಕ್ಕೂಟದ ಪ್ರತಿನಿಧಿಗಳ ಜತೆ ಮಾತನಾಡಿ ಈ ಸಮಸ್ಯೆ ಬಗೆಹರಿಸಿ, ನ್ಯಾಯ ಕೊಡಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಕಾಂಗ್ರೆಸ್ ಕೂಡ ಸರ್ಕಾರ ನಡೆಸಿದೆ. ಸಾಕಷ್ಟು ಬದಲಾವಣೆ ತರಲು ಪ್ರಯತ್ನಿಸಿದೆ. ನೀವು ಹಗಲು-ರಾತ್ರಿ ಜನರ ಸೇವೆಗೆ ಶ್ರಮಿಸುತ್ತಿದ್ದೀರಿ. ನಿಮ್ಮ ಒತ್ತಡ ಏನು ಎಂಬುದರ ಬಗ್ಗೆ ಅರಿವಿದೆ. ಕೊರೋನಾ ಸಮಯದಲ್ಲಿ ತಾವು ಪಟ್ಟ ಶ್ರಮ, ಮಾಡಿದ ತ್ಯಾಗವನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದರು.

ಅನೇಕರು ವೇತನೆ ಸಿಗದೆ ತೊಂದರೆ ಅನುಭವಿಸುತ್ತಿರುವುದು ಗೊತ್ತಿದೆ. ನಾನು, ನಮ್ಮ ವಿರೋಧ ಪಕ್ಷದ ನಾಯಕರು ಈ ವಿಚಾರದಲ್ಲಿ ಹೋರಾಟ ಮಾಡಿದ್ದೇವೆ. ರಾಜ್ಯ ಸರ್ಕಾರ 5 ಸಾವಿರ ರೂಪಾಯಿ ನೆರವು ಕೊಡುತ್ತೇವೆ ಎಂದು ಹೇಳಿತು. ಜತೆಗೆ 1600 ಕೋಟಿ ರುಪಾಯಿ ಕೊರೊನಾ ಪ್ಯಾಕೇಜ್ ಘೋಷಿಸಿತು. ಕೇಂದ್ರದವರು 20 ಲಕ್ಷ ಕೋಟಿ ರೂಪಾಯಿ ನೆರವು ಎಂದರು. ಆದರೆ 5 ಸಾವಿರ ರೂಪಾಯಿ ನೆರವು ಕೊಡಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ನೋವಿಗೆ ಮಂತ್ರಿಗಳು ಸ್ಪಂದಿಸಿಲ್ಲ. ಮುಖ್ಯಮಂತ್ರಿಗಳು ಕೇಳುತ್ತಿಲ್ಲ. ಸರ್ಕಾರದ ಪರವಾಗಿ ಶಾಸಕರೂ ಬಂದಿಲ್ಲ. ಅವರು ಎಲ್ಲಿದ್ದಾರೆ ಎಂದು ಹುಡುಕುವ ಪರಿಸ್ಥಿತಿ ಬಂದಿದೆ ಎಂದು ಶಿವಕುಮಾರ್ ಹೇಳಿದರು.

ತಾವು ಇಂಧನ ಮಂತ್ರಿಯಾಗಿದ್ದಾಗ ಕೆಇಬಿಯವರಿಗೆ ವೇತನ ಭತ್ಯೆ ಹೆಚ್ಚಿಸಲಾಗಿತ್ತು. ಕೆಇಬಿ ಬೋರ್ಡ್ ನಲ್ಲಿ ಲೈನ್ ಮೆನ್ ಹಾಗೂ ಇಂಜಿನಿಯರ್ ಗಳ ಪರವಾಗಿ ಇಬ್ಬರು ಪ್ರತಿನಿಧಿಗಳು ಇರುತ್ತಾರೆ. ಸಭೆಯಲ್ಲಿ ಅವರ ಪರವಾಗಿ ಧ್ವನಿ ಎತ್ತುತ್ತಿದ್ದರು. 1.25 ಲಕ್ಷ ಸಾರಿಗೆ ನೌಕರರು 40 ಕೋಟಿ ಜನರಿಗೆ ಸೇವೆ ನೀಡುತ್ತಿದ್ದಾರೆ. ಅವರಿಗೆ ರಕ್ಷಣೆ ನೀಡಬೇಕು. ಸಾರಿಗೆ ನೌಕರರ ಹೋರಾಟ, ನೋವಿನಲ್ಲಿ ಕಾಂಗ್ರೆಸ್ ಜತೆಗಿರುತ್ತದೆ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ನಿಮ್ಮ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ನಿಮ್ಮ ಪ್ರತಿನಿಧಿಗಳಾಗಿ ಇಬ್ಬರನ್ನು ನೇಮಕ ಮಾಡುತ್ತೇವೆ. ನಿಮ್ಮ ಧ್ವನಿಯಾಗಿ ಆಡಳಿತ ಮಂಡಳಿಯಲ್ಲಿ ಯಾರಾದರೂ ಇರಬೇಕು. ನಿಮ್ಮ ನೋವು ಏನು ಎಂಬುದು ಅವರಿಗೂ ಅರಿವಾಗಬೇಕು. ಇದಕ್ಕೆ ಪರಿಹಾರ ಕಂಡು ಹಿಡಿಯಬೇಕು. ಸಾರಿಗೆ ಮಂತ್ರಿಗಳು ಅಡ್ರೆಸ್ ಗೆ ಇಲ್ಲ ಎಂದು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಬೇರೆ ಮಂತ್ರಿಗಳು ಕೂಡ ನಿಮ್ಮ ಮನವಿ ಆಲಿಸಲು ಬರಬಹುದಿತ್ತು. ಆದರೆ ಅವರೂ ಬಂದಿಲ್ಲ. ಹಾಗಾಗಿ ಕೂಡಲೇ ಈ ಇಲಾಖೆಗೆ ಸಂಬಂಧಿಸಿದ ನೌಕರರ ಜತೆ ಸರ್ಕಾರ ಕೂತು ಚರ್ಚಿಸಬೇಕು ಎಂದರು.

SCROLL FOR NEXT