ರಾಜಕೀಯ

ಸ್ವಪಕ್ಷದವರೇ ಚೂರಿ ಇರಿದರು: 'ಕೈ' ನಾಯಕರ ಕಣ್ಣು ಕೆಂಪಾಗಿಸಿದ ಸಿದ್ದರಾಮಯ್ಯ ಹೇಳಿಕೆ

Manjula VN

ಮೈಸೂರು: ಸ್ವಪಕ್ಷದವರೇ ನಾನು ಸೋಲು ಕಾಣುವಂತೆ ಮಾಡಿದ್ದರು, ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಇದೀಗ ರಾಜ್ಯ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಗಾಗುವಂತೆ ಮಾಡಿದೆ. 

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ವಪಕ್ಷದ ಒಳಸಂಚಿನಿಂದ ನಾನು ಸೋಲಬೇಕಾಯಿತು. ನನ್ನ ಬೆನ್ನಿಗೆ ಚೂರಿ ಇರಿದರು. ಆದರೆ, ಬಾದಾಮಿ ಜನ ನನ್ನ ಕೈ ಹಿಡಿದ್ರು. ಒಂದು ವೇಳೆ ಅಲ್ಲೂ ಕೂಡ ಸೋತಿದ್ದಿದ್ರೆ ನನ್ನ ರಾಜಕೀಯ ಭವಿಷ್ಯ ಏನಾಗುತ್ತಿತ್ತಿ ಎಂದು ಹೇಳಿದ್ದರು. ಈ ಹೇಳಿಕೆ ಇದೀಗ ಕೈಪಾಳಯದಲ್ಲಿ ತೀವ್ರ ಸಂಚಲನವನ್ನು ಮೂಡಿಸಿದೆ. 

ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಎ.ಹೆಚ್.ವಿಶ್ವನಾಥ್ ಅವರು, ಸಿದ್ದರಾಮಯ್ಯ ಅವರು ನನ್ನನ್ನು ಸೇರಿ ಕಾಂಗ್ರೆಸ್ ನಲ್ಲಿದ್ದ ಸಾಕಷ್ಟು ಜನರಿಗೆ ತಾವು ಮುಖ್ಯಮಂತ್ರಿಯಾಗುವ ಸಲುವಾಗಿ ಬೆನ್ನಿಗೆ ಚೂರಿ ಇರಿದಿದ್ದರು. ಇದೀಗ ಅವರಿಗೆ ಆ ನೋವು ಅರ್ಥವಾಗುತ್ತಿದೆ ಎಂದು ಹೇಳಿದ್ದಾರೆ. 

ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು, ಚುನಾವಣೆ ನಡೆದು ಎರಡು ವರ್ಷಗಳಾದ ಬಳಿಕ ಈ ವಿಚಾರದ ಕುರಿತು ಏಕೆ ಮಾತನಾಡಲಾಗುತ್ತಿದೆ? ಇಂತಹ ಹೇಳಿಕೆಗಳು ಪಕ್ಷದ ಕಾರ್ಯಕರ್ತರಲ್ಲಿ ನಿರಾಶೆಗಳನ್ನು ಮೂಡಿಸುತ್ತದೆ ಎಂದು ಹೇಳಿದ್ದಾರೆ. 

ಈ ನಡುವೆ ಹೇಳಿಕೆ ನೀಡಿರುವ ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಆರ್.ಧ್ರುವನಾರಾಯಣ್ ಅವರು, ಬೇರೆ ಪಕ್ಷಗಳು ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಹಿಡಿದು ರಾಜಕೀಯ ಮಾಡುತ್ತಿವೆ. ಆದರೆ, ಪಕ್ಷದ ನಾಯಕರ ಗಮನ ಮತದಾರರನ್ನು ತಲುಪುದಾಗಿದ್ದು, ಸರ್ಕಾರದ ವೈಫಲ್ಯಗಳನ್ನು ತಿಳಿಸುತ್ತೇವೆಂದು ತಿಳಿಸಿದ್ದಾರೆ. 

ರಾಜಕೀಯ ತಜ್ಞ ಪ್ರೊ.ಮುಝಾಫರ್ ಅಸಾದಿಯವರು ಮಾತನಾಡಿ, ಸಿದ್ದರಾಮಯ್ಯ ಅವರ ಈ ಹೇಳಿಕೆ ರಾಜಕೀಯವಾಗಿ ತಮ್ಮ ಪ್ರತಿಸ್ಪರ್ಧಿಗಳನ್ನು ಸ್ಥಳೀಯವಾಗಿ ಮುಗಿಸುವ ಉದ್ದೇಶವನ್ನು ಹೊಂದಿದೆ ಎಂದಿದ್ದಾರೆ. 

ತಮ್ಮ ಹೇಳಿಕೆ ಸಂಬಂಧ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿರುವ ಸ್ಥಳೀಯ ನಾಯಕರ ಕುರಿತು ನಾನು ಹೇಳಿದೆ ನೀಡಿದ್ದೆ ಎಂದು ತಿಳಿಸಿದ್ದಾರೆ. 

SCROLL FOR NEXT